ವಿಜಯವಾಡ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಮತ್ತು ವೈಎಸ್ಆರ್ಸಿ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು 2024 ರ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದರು ಮತ್ತು ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಜಾರಿಗೊಳಿಸುವುದಾಗಿ ಪ್ರತಿಪಾದಿಸಿದರು.
ಇಂದು ಸಿಎಂ ಕ್ಯಾಂಪ್ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಜಗನ್, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಾಯೋಗಿಕ ವಿಷಯಗಳು ಮಾತ್ರ ಇವೆ ಎಂದು ಹೇಳಿದರು.
“ಸುಳ್ಳು ಹಬ್ಬಿಸುವಲ್ಲಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಸ್ಪರ್ಧಿಸಲು ನಾನು ಬಯಸುವುದಿಲ್ಲ. ಜಾರಿಗೊಳಿಸಬಹುದಾದ ಭರವಸೆಗಳನ್ನು ಮಾತ್ರ ನೀಡುತ್ತೇನೆ. 2019 ರಲ್ಲಿ, ನಾವು ನವರತ್ನಗಳು ಕಾರ್ಯಕ್ರಮಗಳ ಭರವಸೆ ನೀಡಿದ್ದೇವೆ ಮತ್ತು ಅದರಲ್ಲಿ ಶೇ. 99.4 ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ” ಎಂದು ಅವರು ವಿವರಿಸಿದರು.
ಕಳೆದ 58 ತಿಂಗಳಲ್ಲಿ ಎಲ್ಲಾ ಭರವಸೆಗನ್ನು ಅನುಷ್ಠಾನಗೊಳಿಸಿದ್ದೇವೆ. ಹಿಂದಿನ ಟಿಡಿಪಿ ಮೈತ್ರಿಕೂಟದ ಪ್ರಣಾಳಿಕೆಯೊಂದಿಗೆ(2014) ಹೋಲಿಸಿದರೆ, ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾರು ಪ್ರಾಮಾಣಿಕರು ಎಂಬ ಸತ್ಯವನ್ನು ಅಂಕಿಅಂಶಗಳೇ ಹೇಳುತ್ತಿವೆ ಎಂದು ಜಗನ್ ಹೇಳಿದರು.
ಕಳೆದ 58 ತಿಂಗಳುಗಳಲ್ಲಿ ಜಾರಿಗೆ ತಂದ ಪ್ರತಿಯೊಂದು ಯೋಜನೆಯನ್ನು ಮುಂದುವರಿಸಲಾಗುವುದು ಎಂದ ಆಂಧ್ರ ಸಿಎಂ, ಸಮಾಜ ಕಲ್ಯಾಣ ಪಿಂಚಣಿಯನ್ನು ಈಗಿರುವ 3,000 ರೂ.ಗಳಿಂದ 3,500 ರೂ.ಗೆ ಹೆಚ್ಚಿಸಲಾಗುವುದು ಎಂದರು.
ಇನ್ನು ರಾಜಧಾನಿ ವಿಚಾರಕ್ಕೆ ಸಂಬಂಧಿಸಿದಂತೆ, ಚುನಾವಣೆಯ ನಂತರ ತಮ್ಮ ಸರ್ಕಾರ ರಚನೆಯಾದರೆ, ವಿಶಾಖಪಟ್ಟಣಂ ಕಾರ್ಯಕಾರಿ ರಾಜಧಾನಿಯಾಗಲಿದೆ ಮತ್ತು ಅಲ್ಲಿಂದಲೇ ಆಡಳಿತ ನಡೆಸಲಾಗುವುದು ಎಂದು ಜಗನ್ ಸ್ಪಷ್ಟಪಡಿಸಿದ್ದಾರೆ.
“ವಿಶಾಖಪಟ್ಟಣಂ ಅನ್ನು ಬೆಳವಣಿಗೆಯ ಎಂಜಿನ್ ಆಗಿ ಅಭಿವೃದ್ಧಿಪಡಿಸಲಾಗುವುದು. ಅಮರಾವತಿಯನ್ನು ಶಾಸಕಾಂಗ ರಾಜಧಾನಿಯಾಗಿ ಮತ್ತು ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು ” ಎಂದು ಜಗನ್ ಹೇಳಿದರು.
Advertisement