ಬಜೆಟ್ 2024: ಅರ್ಹ ಮಧ್ಯಮ ವರ್ಗದವರಿಗೆ ವಸತಿ ಯೋಜನೆ; ಹಣಕಾಸು ಸಚಿವೆ ಭರವಸೆ
ನವದೆಹಲಿ: ಸಮಾಜದಲ್ಲಿನ ಮಧ್ಯಮ ವರ್ಗದವರು ಸ್ವಂತ ಮನೆ ಹೊಂದಲು ಕೇಂದ್ರ ಸರ್ಕಾರವು ವಸತಿ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.
ಗ್ರಾಮೀಣ ವಸತಿ ಯೋಜನೆಯಡಿ ದೇಶದಲ್ಲಿ ಮೂರು ಕೋಟಿ ಮನೆಗಳ ಗುರಿಯನ್ನು ಸಾಧಿಸುವ ಸಮೀಪದಲ್ಲಿ ಇದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ತನ್ನ ಚುನಾವಣಾ ಪೂರ್ವ ಮಧ್ಯಂತರ ಬಜೆಟ್ನಲ್ಲಿ, ಸುಸ್ಥಿರ ಅಭಿವೃದ್ಧಿ ಮತ್ತು ಉತ್ಪಾದಕತೆಯನ್ನು ಸುಧಾರಿಸುವ ಆರ್ಥಿಕ ವಿಧಾನವನ್ನು ಸರ್ಕಾರವು ಅಳವಡಿಸಿಕೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈಗಿರುವ ಆಸ್ಪತ್ರೆ ಮೂಲಸೌಕರ್ಯಗಳನ್ನು ಬಳಸಿಕೊಂಡು ಸರ್ಕಾರವು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಿದೆ. ಪ್ರತಿ ತಿಂಗಳು 300 ಯೂನಿಟ್ಗಳವರೆಗೆ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸಲು ರೂಫ್ಟಾಪ್ ಸೌರೀಕರಣದ ಯೋಜನೆಯನ್ನು ತರಲಾಗುವುದು. ಇದು ವಾರ್ಷಿಕವಾಗಿ 15,000-18,000 ರೂಪಾಯಿಗಳವರೆಗೆ ಉಳಿತಾಯ ಒದಗಿಸುತ್ತದೆ.
ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಹಣಕಾಸು ಸಚಿವರು ಘೋಷಿಸಿದರು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, 2022-23ರಲ್ಲಿ ಭಾರತದ ಹಾಲಿನ ಉತ್ಪಾದನೆಯು 230.58 ಮಿಲಿಯನ್ ಟನ್ಗಳಿಗೆ 4 ಶೇಕಡಾ ಏರಿಕೆಯಾಗಿದೆ.
ಎಣ್ಣೆಕಾಳುಗಳ ಉತ್ಪಾದನೆಗೆ ಆತ್ಮ ನಿರ್ಭರ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ರಕ್ಷಣೆಯನ್ನು ವಿಸ್ತರಿಸುವುದಾಗಿ ಸಚಿವೆ ಘೋಷಿಸಿದರು. ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ-ಜನ ಆರೋಗ್ಯ ಯೋಜನೆ (AB-PMJAY) ವಿಶ್ವದಲ್ಲೇ ಅತಿ ದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ವಿಮಾ ಯೋಜನೆಯಾಗಿದ್ದು, ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ಒದಗಿಸುತ್ತದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ