ರಾಮಮಂದಿರವನ್ನು ಹೊಗಳಿದ ಐಯುಎಂಎಲ್ ನಾಯಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಕೇರಳ: ಭಾರತೂಯ ಮುಸ್ಲಿಂ ಲೀಗ್ ಒಕ್ಕೂಟ (ಐಯುಎಂಎಲ್) ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಳ್ ರಾಮಮಂದಿರ ನಿರ್ಮಾಣವಾಗಿರುವುದನ್ನು ಬೆಂಬಲಿಸಿದ್ದು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ, ಈಗ ಮಸೀದಿಯೂ ನಿರ್ಮಾಣಗೊಳ್ಳಲಿದ್ದು, ಭಾರತದ ಜಾತ್ಯಾತೀತತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಐಯುಎಂಎಲ್ ವಿಪಕ್ಷ ಕಾಂಗ್ರೆಸ್-ಯುಡಿಎಫ್ ಮಿತ್ರ ಪಕ್ಷವಾಗಿದ್ದು, ಮುಸ್ಲಿಮ್ ಸಮುದಾಯದ ಪ್ರಬಲ ಪಕ್ಷವಾಗಿದೆ. ಜನವರಿ 24 ರಂದು ಇಲ್ಲಿಗೆ ಸಮೀಪದ ಮಂಜೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಂಗಳ್ ಹೇಳಿಕೆ ನೀಡಿದ್ದರು, ಆದರೆ ಅದರ ವಿಡಿಯೋ ಇಂದು ವೈರಲ್ ಆಗಿದೆ.
ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನೇತೃತ್ವದ ಎಡ ಡೆಮಾಕ್ರಟಿಕ್ ಫ್ರಂಟ್ ಸರ್ಕಾರದ ಸಮ್ಮಿಶ್ರ ಪಾಲುದಾರ ಇಂಡಿಯನ್ ನ್ಯಾಷನಲ್ ಲೀಗ್ (ಐಎನ್ಎಲ್) ಐಯುಎಂಎಲ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರೆ, ಕಾಂಗ್ರೆಸ್ ಪಕ್ಷ ಮತ್ತು ಐಯುಎಂಎಲ್ ತಂಗಲ್ ಅವರನ್ನು ಸಮರ್ಥಿಸಿಕೊಂಡು ದ್ವೇಷದ ಪ್ರಚಾರ ಮತ್ತು ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಮಂಜೇರಿಯಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಂಗಳ್, ರಾಮ ಮಂದಿರ ದೇಶದ ಬಹುಸಂಖ್ಯಾತ ಜನರಿಂದ ಪೂಜಿಸಲ್ಪಡುವುದಾಗಿದೆ ಇದು ವಾಸ್ತವ ಎಂದು ಹೇಳಿದ್ದಾರೆ. "ನಾವು ರಾಮಮಂದಿರದ ವಿರುದ್ಧ ಪ್ರತಿಭಟಿಸುವ ಅಗತ್ಯವಿಲ್ಲ. ನ್ಯಾಯಾಲಯದ ಆದೇಶದ ಆಧಾರದ ಮೇಲೆ ಮಂದಿರವನ್ನು ನಿರ್ಮಿಸಲಾಗಿರುವುದು ಮತ್ತು ಬಾಬರಿ ಮಸೀದಿಯನ್ನು ನಿರ್ಮಿಸಲಾಗುವುದು ಎರಡೂ ಈಗ ಭಾರತದ ಭಾಗವಾಗಿದೆ. ರಾಮಮಂದಿರ ಮತ್ತು ಪ್ರಸ್ತಾವಿತ ಬಾಬರಿ ಮಸೀದಿ ನಮ್ಮ ದೇಶದ ಜಾತ್ಯತೀತತೆಯನ್ನು ಬಲಪಡಿಸುವ ಎರಡು ಅತ್ಯುತ್ತಮ ಉದಾಹರಣೆಗಳಾಗಿವೆ, ”ಎಂದು ತಂಗಲ್ ವೀಡಿಯೊದಲ್ಲಿ ಹೇಳುತ್ತಿರುವುದು ಕಂಡುಬಂದಿದೆ.