ಸಂಸತ್ ನ ಬಜೆಟ್ ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಪ್ರಧಾನಿ ಮೋದಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ನೀತಿ ಪಾರ್ಶ್ವವಾಯುವಿಗೆ ಹೆಸರುವಾಸಿಯಾಗಿತ್ತು ಎಂದು ಆರೋಪಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಅವಧಿಯಲ್ಲಿ ಭಾರತದ ಆರ್ಥಿಕತೆಯು ದುರ್ಬಲವಾಗಿತ್ತು ಎಂದು ದೋಷಾರೋಪಣೆ ಮಾಡಿದ್ದಾರೆ.
ಕಾಂಗ್ರೆಸ್ ಅವಧಿಯ 10 ವರ್ಷದ ಆಡಳಿತಕ್ಕೂ ತಮ್ಮ ಅವಧಿಯ 10 ವರ್ಷದ ಆಡಳಿತಕ್ಕೂ ಹೋಲಿಕೆ ಮಾಡಿರುವ ಪ್ರಧಾನಿ ಮೋದಿ, ನಮ್ಮ 10 ವರ್ಷಗಳ ಆಡಳಿತಾವಧಿಯನ್ನು ದೊಡ್ಡ ಹಾಗೂ ದೃಢ ನಿರ್ಧಾರಗಳಿಗಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಅಧಿಕಾರದ ದಾಹ ಹೊಂದಿದ್ದ ಕಾಂಗ್ರೆಸ್, ಬಹಿರಂಗವಾಗಿ ಪ್ರಜಾಪ್ರಭುತ್ವದ ಕತ್ತು ಹಿಸುಕಿತ್ತು, ರಾತ್ರೋರಾತ್ರಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಕಾಂಗ್ರೆಸ್ ವಿಸರ್ಜಿಸಿತ್ತು. ಅಷ್ಟೇ ಅಲ್ಲದೇ ಸಂವಿಧಾನದ ಶಿಷ್ಟಾಚಾರಗಳನ್ನು ಜೈಲಿಗೆ ಹಾಕಿತ್ತು. ಪತ್ರಿಕೆಗಳಿಗೆ ಬೀಗ ಹಾಕಲು ಯತ್ನಿಸಿತ್ತು. ಇದಿಷ್ಟು ಸಾಲದೆಂಬಂತೆ ಈಗ ದೇಶವನ್ನು ಮತ್ತೆ ಉತ್ತರ-ದಕ್ಷಿಣಗಳಾಗಿ ಇಬ್ಭಾಗ ಮಾಡುವ ಮಾತನ್ನಾಡುತ್ತಿದೆ, ಇಂತಹ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆ ಬಗ್ಗೆ ಉಪನ್ಯಾಸ ನೀಡುತ್ತಿದೆ ಎಂದು ಮೋದಿ ವಾಕ್ಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ಒಬಿಸಿಗೆ ಯಾವತ್ತೂ ಸಂಪೂರ್ಣ ಮೀಸಲಾತಿ ನೀಡಲಿಲ್ಲ, ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ನೀಡದ ಕಾಂಗ್ರೆಸ್, ಬಾಬಾಸಾಹೇಬರನ್ನು ಭಾರತ ರತ್ನಕ್ಕೆ ಅರ್ಹರೆಂದು ಎಂದಿಗೂ ಪರಿಗಣಿಸಲಿಲ್ಲ. ತಮ್ಮ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡುತ್ತಲೇ ಬಂದಿತ್ತು. ಇಂತಹ ಕಾಂಗ್ರೆಸ್ ಈಗ ನಮಗೆ ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಹೇಳಿಕೊಡುತ್ತಿದ್ದಾರೆ. ನಾಯಕರಾಗಿ ಯಾವುದೇ ಗ್ಯಾರಂಟಿ ಇಲ್ಲದವರು ಮೋದಿಯವರ ಖಾತರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
Advertisement