ಬಿಜೆಪಿ ಜೊತೆ ಮೈತ್ರಿಯ ಸುಳಿವು ನೀಡಿದ RLD ನಾಯಕ ಜಯಂತ್ ಚೌಧರಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ ಮಾಜಿ ಪ್ರಧಾನಿ ಚರಣ್ ಸಿಂಗ್ ಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ ರಾಜಕಾರಣದಲ್ಲಿ ಮೈತ್ರಿ ಸಮೀಕರಣಗಳು ಮತ್ತೊಮ್ಮೆ ಬದಲಾಗುವ ಸೂಚನೆ ಲಭ್ಯವಾಗಿದೆ.
ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ
ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ ಮಾಜಿ ಪ್ರಧಾನಿ ಚರಣ್ ಸಿಂಗ್ ಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ ರಾಜಕಾರಣದಲ್ಲಿ ಮೈತ್ರಿ ಸಮೀಕರಣಗಳು ಮತ್ತೊಮ್ಮೆ ಬದಲಾಗುವ ಸೂಚನೆ ಲಭ್ಯವಾಗಿದೆ.
 
ರಾಷ್ಟ್ರೀಯ ಲೋಕದಳದ ನಾಯಕ ಜಯಂತ್ ಚೌಧರಿ, ತಮ್ಮ ಅಜ್ಜ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಗೆ ಭಾರತ ರತ್ನ ನೀಡಿರುವ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಈ ಬೆಳವಣಿಗೆಯಿಂದ ಸಹಜವಾಗಿಯೇ ಆರ್ ಎಲ್ ಡಿ ಪಕ್ಷ ಎನ್ ಡಿಎ ಮೈತ್ರಿಕೂಟದತ್ತ ಹೊರಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್ ಎಲ್ ಡಿ ಎನ್ ಡಿಎ ಮೈತ್ರಿಕೂಟ ಸೇರುತ್ತದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಜಯಂತ್ ಚೌಧರಿ, ಈಗ ಇನ್ನೇನಾದರೂ ಉಳಿದಿದೆಯೇ? ನಿಮ್ಮ ಪ್ರಶ್ನೆಗಳನ್ನು ನಾನು ಹೇಗೆ ಅಲ್ಲಗಳೆಯಲಿ? ಎಂದು ಮರುಪ್ರಶ್ನಿಸುವ ಮೂಲಕ ಎನ್ ಡಿಎ ಸೇರುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ಈ ಹಿಂದಿನ ಯಾವುದೇ ಸರ್ಕಾರಗಳೂ ತೆಗೆದುಕೊಳ್ಳದಂತಹ ನಿರ್ಧಾರವನ್ನು ಪ್ರಧಾನಿ ಮೋದಿ ಸರ್ಕಾರ ದೂರದೃಷ್ಟಿ ಹಾಗೂ ಸಮರ್ಪಣೆಯೊಂದಿಗೆ ತೆಗೆದುಕೊಂಡಿದೆ.  ​

"ಇದು ದೇಶಕ್ಕೆ ಒಂದು ದೊಡ್ಡ ದಿನ. ಇದು ನನಗೆ ಭಾವನಾತ್ಮಕ ಕ್ಷಣವಾಗಿದೆ, ಇದು ಸ್ಮರಣೀಯವಾಗಿದೆ. ನಾನು ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತ ಸರ್ಕಾರ ಮತ್ತು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಏಕೆಂದರೆ ಇದು ಅವರ ದೂರ ದೃಷ್ಟಿಯ ಭಾಗವಾಗಿದೆ. ಅವರು ಈ ನಿರ್ಧಾರವನ್ನು ತೆಗೆದುಕೊಂಡು ಚೌಧರಿ ಚರಣ್ ಸಿಂಗ್ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿದರು” ಎಂದು ಜಯಂತ್ ಚೌಧರಿ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಚರಣ್ ಸಿಂಗ್ ಗೆ ಭಾರತ ರತ್ನ ನೀಡಿರುವುದು ದೊಡ್ಡ ಸಂದೇಶವನ್ನು ರವಾನಿಸುತ್ತದೆ. ಸರ್ಕಾರದ ನಿರ್ಧಾರದೊಂದಿಗೆ ದೇಶದ ಭಾವನೆಗಳು ಬೆಸೆದುಕೊಂಡಿದೆ. ಮೋದಿ ಅವರು ದೇಶದ ಚಿಂತನೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತೋರಿಸಿದ್ದಾರೆ,'' ಎಂದು ಜಯಂತ್ ಚೌಧರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com