ಭೋಪಾಲ್: ಮಧ್ಯಪ್ರದೇಶ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಧ್ಯಕ್ಷ ವಿಡಿ ಶರ್ಮಾ ಅವರು ದೇಶದ ಅತ್ಯಂತ ಹಳೆಯ ಪಕ್ಷದ ಬಗ್ಗೆ ಹಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ ಮಾರನೇ ದಿನವೇ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್ನಲ್ಲಿದ್ದ ಕಾಂಗ್ರೆಸ್ ಅನ್ನು ತೆಗೆದು ಹಾಕಿದ್ದಾರೆ.
ಮಧ್ಯ ಪ್ರದೇಶದ ಛಿಂದ್ವಾರಾದಿಂದ ಕಾಂಗ್ರೆಸ್ನ ಲೋಕಸಭಾ ಸದಸ್ಯರಾಗಿರುವ ನಕುಲ್ ನಾಥ್ ಅವರ ಈ ನಡೆ ಮತ್ತು ಅವರ ತಂದೆ ಕಮಲ್ ನಾಥ್ ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಕಮಲ್ ನಾಥ್ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ವಿಡಿ ಶರ್ಮಾ, "ಅವರಿಗೆ ನಮ್ಮ ಪಕ್ಷದ ಬಾಗಿಲು ತೆರೆದಿದ್ದೇವೆ. ಏಕೆಂದರೆ ಕಾಂಗ್ರೆಸ್ ರಾಮನನ್ನು ಬಹಿಷ್ಕರಿಸುತ್ತದೆ. ಆದರೆ ಭಾರತೀಯರ ಹೃದಯದಲ್ಲಿ ರಾಮನಿದ್ದಾನೆ. ಕಾಂಗ್ರೆಸ್ ಅವರನ್ನು ಅವಮಾನಿಸಿದೆ. ಇದರಿಂದ ಅವರು ನೊಂದಿದ್ದಾರೆ ಮತ್ತು ಅಸಮಾಧಾನಗೊಂಡಿದ್ದಾರೆ ಎಂದರು.
ತಾತ್ವಿಕವಾಗಿ ನಮ್ಮ ಸಿದ್ಧಾಂತ ಹಾಗೂ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದುವರಿಯಲು ಇಚ್ಛೆ ಇರುವ ಎಲ್ಲರಿಗೂ ಪಕ್ಷದ ಬಾಗಿಲು ತೆರೆದಿದೆ ಎಂದು ಶರ್ಮಾ ಹೇಳಿದ್ದಾರೆ.
Advertisement