ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಲು ಹೋದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆದಿದೆ. ಟಿಎಂಸಿಯ ಬೆಂಬಲಿಗರಿಂದ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಟಿಎಂಸಿ ನಾಯಕ ಶೇಖ್ ಸಾಜಹಾನ್ ಬೆಂಬಲಿಗರು ಈ ದಾಳಿ ನಡೆಸಿದ್ದು, ಅಧಿಕಾರಿಗಳು ಪಶ್ಚಿಮ ಬಂಗಾಳದ ಉತ್ತರ 24 ಪರಗಣಾಸ್ ಜಿಲ್ಲೆಯಲ್ಲಿ ಪಡಿತರ ವಿತರಣೆ ಹಗರಣದ ಸಂಬಂಧದ ತನಿಖೆಯ ಭಾಗವಾಗಿ ಶೇಖ್ ಸಾಜಹಾನ್ ನಿವಾಸದ ಮೇಲೆ ದಾಳಿ ನಡೆಸಲು ಯತ್ನಿಸಿದಾಗ ಈ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ 15 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು ಈ ಪೈಕಿ ಶೇಖ್ ಸಾಜಹಾನ್ ನಿವಾಸವೂ ಒಂದಾಗಿದೆ.
ಶೇಖ್ ನಿವಾಸಕ್ಕೆ ಬಂದ ಅಧಿಕಾರಿಗಳನ್ನು ಟಿಎಂಸಿ ನಾಯಕನ ಬೆಂಬಲಿಗರು ಘೇರಾವ್ ಮಾಡಿ ಆ ಪ್ರದೇಶವನ್ನು ತೊರೆಯುವಂತೆ ಒತ್ತಾಯಿಸಿದರು ಎಂದು ಹಲ್ಲೆಗೊಳಗಾದ ಅಧಿಕಾರಿ ಹೇಳಿದ್ದಾರೆ. ಈ ಪೈಕಿ ಓರ್ವ ಅಧಿಕಾರಿ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಹಲವು ವಾಹನಗಳಿಗೆ ಹಾನಿಯಾಗಿದೆ.
ಸಜಹಾನ್ ಬಹುಕೋಟಿ ಪಡಿತರ ವಿತರಣೆ ಹಗರಣದ ಸಂಬಂಧ ಬಂಧಿತರಾಗಿರುವ ರಾಜ್ಯ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ಆಪ್ತ ಸಹಾಯಕ ಎಂದು ಪರಿಗಣಿಸಲಾಗಿದೆ. ಹಿಂದೆಂದೂ ಈ ರೀತಿಯ ದಾಳಿ ನಡೆದಿರುವ ಉದಾಹರಣೆಗಳಿಲ್ಲ. ಶೇಖ್ ಷಹಜಹಾನ್ ಕುರಿತು ನಮ್ಮ ದೆಹಲಿ ಕಚೇರಿಗೆ ವರದಿ ಕಳುಹಿಸಿದ್ದೇವೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಉತ್ತರ 24 ಪರಗಣ ಜಿಲ್ಲೆಯ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಲಿಲ್ಲ ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.
Advertisement