ಕಲಬುರಗಿ: ಯಾವುದೇ ಪಕ್ಷದ ಕಾರ್ಯಕರ್ತರೂ ಸೇರಿದಂತೆ ಶ್ರೀರಾಮನಲ್ಲಿ ನಂಬಿಕೆ ಹೊಂದಿರುವ ಯಾವುದೇ ಆಸ್ತಿಕರು ಜ.22 ರಂದು ಅಯೋಧ್ಯೆಗೆ ಹೋಗಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ರಾಮಜನ್ಮಭೂಮಿ ಟ್ರಸ್ಟ್ ತಮ್ಮನ್ನು ಹಾಗೂ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.
I.N.D.I.A ನಲ್ಲಿ ಒಗ್ಗಟ್ಟಿನ ಬಗ್ಗೆ ಮಾತನಾಡಿದ ಖರ್ಗೆ, ದೊಡ್ಡ ಮಟ್ಟದ ಶಕ್ತಿಯಾಗಿ ಮೈತ್ರಿಕೂಟ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದು, ಬಿಜೆಪಿಗೆ ಚುನಾವಣೆಯಲ್ಲಿ ಪಾಠ ಕಲಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿಕೂಟದಲ್ಲಿ ಒಗ್ಗಟ್ಟು ಈ ಕ್ಷಣದ ಅಗತ್ಯತೆಯಾಗಿದೆ ಎಂದು ಹೇಳಿರುವ ಖರ್ಗೆ, ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿ, ಎಲ್ಲ ಮೈತ್ರಿ ಪಕ್ಷಗಳು ಯಾವ್ಯಾವ ಸ್ಥಾನಗಳಲ್ಲಿ ಗೆಲ್ಲಬಹುದು ಮತ್ತು ಚುನಾವಣೆಯಲ್ಲಿ ಎಷ್ಟು ಗೆಲ್ಲಬಹುದು ಎಂಬ ವಿಶ್ಲೇಷಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇತರ ಪಕ್ಷಗಳಿಗೆ ನೀಡಬೇಕಾದ ಸ್ಥಾನಗಳು ಮತ್ತು ಸ್ಪರ್ಧಿಸಬಹುದಾದ ಸ್ಥಾನಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷದ ಸಮಿತಿಯು ಮೈತ್ರಿಯ ಪಾಲುದಾರರನ್ನು ಭೇಟಿ ಮಾಡಲಿದೆ. I.N.D.I.A ಯ ಅಂತಿಮ ಗುರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಬೇಕಾಗಿರುವುದು ಎಂದರು.
Advertisement