ವಿಜಯವಾಡ: ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಭಾನುವಾರ ಅಧಿಕಾರ ಸ್ವೀಕರಿಸಿದರು. ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಹಾಗೂ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅವರು ನೂತನ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ನಂತರ ಮಾತನಾಡಿದ ಶರ್ಮಿಳಾ, ವೈಎಸ್ ಆರ್ ಪಿ ಹಾಗೂ ಟಿಡಿಪಿ ಬಿಜೆಪಿಯ ಮೈತ್ರಿ ಪಕ್ಷಗಳಾಗಿವೆ. ವೈಎಸ್ ಆರ್ ಸಿಪಿ ಸರ್ಕಾರದ ಅವಧಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ .ವೈಎಸ್ ಆರ್ ಸಿಪಿ ಮತ್ತು ಟಿಡಿಪಿ ಸರ್ಕಾರದ ಅವಧಿಯಲ್ಲಿ ಆಂಧ್ರಪ್ರದೇಶದ ಸಾಲದ ಪ್ರಮಾಣ ರೂ. 10 ಲಕ್ಷ ಕೋಟಿಯಾಗಿದೆ. ಹಾಲಿ ಸರ್ಕಾರಕ್ಕೆ ರಸ್ತೆ ಮಾಡಲು, ಉದ್ಯೋಗಿಗಳಿಗೆ ಸಂಬಳ ನೀಡಲು ಹಣವೇ ಇಲ್ಲ ಎಂದು ಆರೋಪಿಸಿದರು.
ಆಂಧ್ರಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಅಕ್ರಮ ಮರಳುಗಾರಿಕೆಯು ಶೇಕಡಾ 100 ರಷ್ಟು ಏರಿಕೆಯಾಗಿದೆ. ವಿಭಜನೆಯ ನಂತರ 10 ವರ್ಷಗಳಾದರೂ ರಾಜ್ಯವು ವಿಶೇಷ ಸ್ಥಾನಮಾನವನ್ನು ಪಡೆದಿಲ್ಲ. ಜಗನ್ ಮೋಹನ್ ರೆಡ್ಡಿ ಪ್ರತಿಪಕ್ಷದಲ್ಲಿ ಇರುವವರೆಗೂ ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದರು, ಆದರೆ ಮುಖ್ಯಮಂತ್ರಿಯಾದ ನಂತರ ಅದನ್ನು ಮಾಡಲಿಲ್ಲ ಎಂದು ಶರ್ಮಿಳಾ ವಾಗ್ದಾಳಿ ನಡೆಸಿದರು.
ಎಸ್ ಆರ್ ಸಿಪಿ ಹಾಗೂ ಟಿಡಿಪಿ ಬಿಜೆಪಿಯ ಮೈತ್ರಿ ಪಕ್ಷಗಳಾಗಿದ್ದು, ಅವುಗಳಿಗೆ ಮತ ನೀಡಿದರೆ ಬಿಜೆಪಿಗೆ ಹೋಗುತ್ತವೆ. ರಾಜಶೇಖರ ರೆಡ್ಡಿ ಅವರ ಎಲ್ಲಾ ಅಭಿಮಾನಿಗಳು ಕಾಂಗ್ರೆಸ್ ಜೊತೆ ಕೈಜೋಡಿಸುವಂತೆ ಅವರು ಕರೆ ನೀಡಿದರು.
Advertisement