UAPA ಅಡಿಯಲ್ಲಿ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ನ್ಯೂಸ್‌ಕ್ಲಿಕ್‌ನ HR ಮುಖ್ಯಸ್ಥ!

ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ತಮ್ಮ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹಿಂಪಡೆದಿದ್ದಾರೆ. 
ಪ್ರಬೀರ್ ಪುರ್ಕಾಯಸ್ಥ-ಅಮಿತ್ ಚಕ್ರವರ್ತಿ
ಪ್ರಬೀರ್ ಪುರ್ಕಾಯಸ್ಥ-ಅಮಿತ್ ಚಕ್ರವರ್ತಿ

ನವದೆಹಲಿ: ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ತಮ್ಮ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹಿಂಪಡೆದಿದ್ದಾರೆ. 

ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದ ಮೇಲೆ ಯುಎಪಿಎ ಅಡಿಯಲ್ಲಿ ನ್ಯೂಸ್ ಪೋರ್ಟಲ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಸರ್ಕಾರಿ ಸಾಕ್ಷಿಯಾಗಲು ದೆಹಲಿ ನ್ಯಾಯಾಲಯವು ಅಮಿತ್ ಚಕ್ರವರ್ತಿ ಅವರಿಗೆ ಈ ತಿಂಗಳ ಆರಂಭದಲ್ಲಿ ಅನುಮತಿ ನೀಡಿತ್ತು.

ಅಮಿತ್ ಚಕ್ರವರ್ತಿ ಮತ್ತು ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರು ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ತಮ್ಮ ಬಂಧನದ ವಿರುದ್ಧ ಸಲ್ಲಿಸಿದ ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಹಾಜರಾದ ವಕೀಲರು ಚಕ್ರವರ್ತಿ ಅವರ ಮನವಿಯನ್ನು ಹಿಂಪಡೆಯಲು ಅವಕಾಶ ನೀಡುವಂತೆ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವನ್ನು ಕೋರಿದರು.

ಚೀನಾ ಪರ ಪ್ರಚಾರ ಮಾಡಲು ನ್ಯೂಸ್‌ಕ್ಲಿಕ್‌ಗೆ ಪಾವತಿಸಲಾಗುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಲೇಖನದಲ್ಲಿ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಸರಣಿ ದಾಳಿಗಳ ನಂತರ ಅವರನ್ನು ಬಂಧಿಸಲಾಯಿತು. ಹಲವಾರು ಗಂಟೆಗಳ ವಿಚಾರಣೆಯ ನಂತರ 2023ರ ಅಕ್ಟೋಬರ್ 3ರಂದು ಬಂಧಿಸಲಾಯಿತು. ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಸುದ್ದಿ ವೆಬ್‌ಸೈಟ್‌ನ ಮಾನವ ಸಂಪನ್ಮೂಲ ಮುಖ್ಯಸ್ಥ (ಚಕ್ರವರ್ತಿ) ಅವರು ಯುಎಪಿಎ ಪ್ರಕರಣದಲ್ಲಿ ತಮ್ಮ ಪೊಲೀಸ್ ಬಂಧನದ ವಿರುದ್ಧ ಸಲ್ಲಿಸಿದ ಅರ್ಜಿಗಳ ಕುರಿತು ಅಕ್ಟೋಬರ್ 19 ರಂದು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿತ್ತು. ನಂತರ ಪುರ್ಕಾಯಸ್ಥ ಅವರು ಮಧ್ಯಂತರ ವೈದ್ಯಕೀಯ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಎಫ್ಐಆರ್ ಪ್ರಕಾರ ಆರೋಪಿಗಳು ಕೋಟ್ಯಂತರ ರೂಪಾಯಿ ವಿದೇಶಿ ಹಣವನ್ನು ಅಕ್ರಮವಾಗಿ ಸ್ವೀಕರಿಸಿದ್ದಾರೆ. ಭಾರತದ ಸಾರ್ವಭೌಮತೆ, ಏಕತೆ ಮತ್ತು ಭದ್ರತೆಗೆ ಭಂಗ ತರುವ ಉದ್ದೇಶಕ್ಕೆ ಬಳಸಿದ್ದಾರೆ. ವಿದೇಶಿ ಸಂಸ್ಥೆಗಳು ಭಾರತದಲ್ಲಿ ವಿದೇಶಿ ಹಣವನ್ನು ಅಕ್ರಮವಾಗಿ ಹೂಡಿಕೆ ಮಾಡಿರುವುದನ್ನು ರಹಸ್ಯ ಮಾಹಿತಿಯು ಬಹಿರಂಗಪಡಿಸಿದೆ ಎಂದು ಎಫ್ಐಆರ್ ಹೇಳಿದೆ. ಐದು ವರ್ಷಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ನ್ಯೂಸ್‌ಕ್ಲಿಕ್‌ಗೆ ಅಕ್ರಮವಾಗಿ ಸಂದಾಯವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಚಾರ ವಿಭಾಗದ ಸಕ್ರಿಯ ಸದಸ್ಯ ಎಂದು ಹೇಳಲಾದ ನೆವಿಲ್ಲೆ ರಾಯ್ ಸಿಂಘಮ್ ಅವರು ಹಣವನ್ನು ಅಕ್ರಮವಾಗಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಅಂತಿಮವಾಗಿ ತಮ್ಮ ಬಂಧನ, ರಿಮಾಂಡ್ ಮತ್ತು ಯುಎಪಿಎ ಅಡಿಯಲ್ಲಿ ತಮ್ಮ ವಿರುದ್ಧ ದಾಖಲಿಸಿದ ಎಫ್‌ಐಆರ್ ಅನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com