'ಸೂರ್ಯೋದಯ ಯೋಜನೆ' ಘೋಷಿಸಿದ ಪ್ರಧಾನಿ ಮೋದಿ; 1 ಕೋಟಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಕೆ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 'ಸೂರ್ಯೋದಯ ಯೋಜನೆ' ಘೋಷಿಸಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 'ಸೂರ್ಯೋದಯ ಯೋಜನೆ' ಘೋಷಿಸಿದ್ದಾರೆ. 

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ದೇಶವಾಸಿಗಳು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನಲ್ ಹೊಂದಬೇಕೆಂಬ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರ ಘೋಷಣೆಯ ಪ್ರಕಾರ, ಯೋಜನೆಯಡಿಯಲ್ಲಿ ಒಂದು ಕೋಟಿ ಮನೆಗಳ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಸಲಾಗುತ್ತದೆ.

ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು 1 ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸೋಲಾರ್ ಅಳವಡಿಸುವ ಗುರಿಯೊಂದಿಗೆ 'ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ' ಪ್ರಾರಂಭಿಸುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಯಾಗುವುದಲ್ಲದೆ ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲಿದೆ ಎಂದರು.

ರಾಮಲಲ್ಲಾ ಪಟ್ಟಾಭಿಷೇಕದ ನಂತರ ಪ್ರಧಾನಿ ಮೋದಿ ಹೇಳಿದ್ದೇನು?
ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯು ಹೊಸ ಯುಗದ ಆಗಮನದ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಮುಂದಿನ 1000ಕ್ಕೂ ಹೆಚ್ಚು ವರ್ಷಗಳು ಬಲಿಷ್ಠ, ಭವ್ಯ ಮತ್ತು ದೈವಿಕ ಭಾರತದ ಅಡಿಪಾಯವನ್ನು ಹಾಕಲು ಜನರಿಗೆ ಕರೆ ನೀಡಿದರು.

ಹೊಸ ಯುಗದ ಉದಯ

ಅಂತೆಯೇ ಜನವರಿ 22 "ಕ್ಯಾಲೆಂಡರ್‌ನಲ್ಲಿ ದಿನಾಂಕವಲ್ಲ, ಆದರೆ ಹೊಸ ಯುಗದ ಉದಯ. ಸಾವಿರಾರು ವರ್ಷಗಳ ನಂತರವೂ ಜನರು ಈ ದಿನಾಂಕ, ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ನಾವು ಇದನ್ನು ವೀಕ್ಷಿಸುತ್ತಿರುವುದು ರಾಮನ ಪರಮ ಆಶೀರ್ವಾದವಾಗಿದೆ. ಇವು ಶಾಶ್ವತವಾದ ನೆನಪುಗಳು, ನಮ್ಮ ಭವಿಷ್ಯವು ನಮ್ಮ ಭೂತಕಾಲಕ್ಕಿಂತ ಹೆಚ್ಚು ಮುಖ್ಯವಾಗಿದೆ. ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವ ಮೂಲಕ ಮಹಾಮಸ್ತಕಾಭಿಷೇಕ ಸಮಾರಂಭ ನೆರವೇರಿದೆ. ನಾನು ಆಧ್ಯಾತ್ಮಿಕ ಅನುಭವದಿಂದ ನಡುಗುತ್ತಿದ್ದೇನೆ. ನವ ಭಾರತವು ಉದಯಿಸುತ್ತಿದೆ ಮತ್ತು ಹೊಸ ಇತಿಹಾಸವನ್ನು ಬರೆಯುತ್ತಿದೆ. ಶತಮಾನಗಳ ಕಾಯುವಿಕೆ, ತಾಳ್ಮೆ, ತ್ಯಾಗದ ನಂತರ ಇಂದು ನಮ್ಮ ರಾಮ ಆಗಮಿಸಿದ್ದಾನೆ. ಮಂದಿರ ನಿರ್ಮಾಣ ವಿಳಂಬಕ್ಕೆ ನಾನು ಶ್ರೀರಾಮನಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಕಾರ್ಯಕರ್ತರ ತ್ಯಾಗವನ್ನು ಗೌರವಿಸುತ್ತೇನೆ. ರಾಮನು ಇನ್ನು ಮಂದೆ ಸಮಸ್ಯೆಯಲ್ಲ, ರಾಮನೇ ಪರಿಹಾರ. ರಾಮ್ ಲಲ್ಲಾ ಈಗ ಟೆಂಟ್‌ನಲ್ಲಿ ಉಳಿಯುವುದಿಲ್ಲ, ಅವರು ಭವ್ಯವಾದ ದೇವಾಲಯದಲ್ಲಿ ಉಳಿಯುತ್ತಾರೆ. ಭಾರತದಾದ್ಯಂತ ರಾಮನಾಮ ಆಚರಣೆಗಳು ನಡೆಯುತ್ತಿವೆ. ನಾವು ಬೆಂಕಿಯನ್ನು ಹೊತ್ತಿಸುತ್ತಿಲ್ಲ, ನಾವು ಭಾರತವನ್ನು ಪುನಃ ಶಕ್ತಿಯುತಗೊಳಿಸುತ್ತಿದ್ದೇವೆ ಎಂದರು.

"ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ನಾವು ಜೀವಂತವಾಗಿರುವುದೇ ಒಂದು ಸೌಭಾಗ್ಯ. ಈ ಹಂತವನ್ನು ತಲುಪಲು ತುಂಬಾ ಸಮಯ ತೆಗೆದುಕೊಂಡಿದ್ದಕ್ಕಾಗಿ ನಾನು ಶ್ರೀರಾಮನ ಕ್ಷಮೆ ಕೇಳುತ್ತೇನೆ. ಏನಾದರೂ ಲೋಪ ಸಂಭವಿಸಿರಬೇಕು. ಹೀಗಾಗಿ ವಿಳಂಬವಾಯಿತೇನೋ... ಕೆಲವು ರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದಾರೆ. ಭಾರತದ ಸಂವಿಧಾನದಲ್ಲಿ, ಅದರ ಮೊದಲ ಪುಟದಲ್ಲಿ, ಶ್ರೀರಾಮನಿದ್ದಾನೆ. ಕಾನೂನಿನ ಘನತೆಯನ್ನು ಕಾಪಾಡಿದ್ದಕ್ಕಾಗಿ ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ" ಎಂದು ಮೋದಿ ಹೇಳಿದರು.

ಪ್ರಜೆಗಳ ಪ್ರಜ್ಞೆಯು ದೇವರಿಂದ ದೇಶಕ್ಕೆ, ರಾಮನಿಂದ ರಾಷ್ಟ್ರದವರೆಗೆ ವಿಸ್ತರಿಸಬೇಕು

ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕೆ ಕೆಲವರು ಬೆಂಕಿ ಹಚ್ಚುತ್ತೇವೆ ಎಂದು ಎಚ್ಚರಿಸಿದ್ದರು. ಇಂತಹವರಿಗೆ ಭಾರತದ ಸಾಮಾಜಿಕ ಪ್ರಜ್ಞೆಯ ಪರಿಶುದ್ಧತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ರಾಮಲಲ್ಲಾನ ಈ ದೇವಾಲಯದ ನಿರ್ಮಾಣವು ಭಾರತೀಯ ಸಮಾಜದ ಶಾಂತಿ, ತಾಳ್ಮೆ ಮತ್ತು ಪರಸ್ಪರ ಸೌಹಾರ್ದತೆಯ ಸಂಕೇತವಾಗಿದೆ. ಶ್ರೀರಾಮನು ಬೆಂಕಿಯಲ್ಲ, ಅವನು ಶಕ್ತಿ. ರಾಮನು ವಿವಾದವಲ್ಲ, ಅವನು ಪರಿಹಾರ. ರಾಮನು ಕೇವಲ ನಮ್ಮವನಲ್ಲ, ಅವನು ಎಲ್ಲರಿಗೂ ಸೇರಿದವನು. ನಾವು ಇಂದು ಕೇವಲ ರಾಮ್ ಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ಮಾತ್ರವಲ್ಲ... ಭಾರತದ ಮುರಿಯಲಾಗದ ಏಕತೆಯ ಪ್ರಾಣ ಪ್ರತಿಷ್ಠೆಗೂ ಸಾಕ್ಷಿಯಾಗಿದ್ದೇವೆ. ರಾಮನ ಮಂದಿರವನ್ನು ನಿರ್ಮಿಸಲಾಗಿದೆ. ಮುಂದೆ ಏನು? ಪ್ರತಿಯೊಬ್ಬ ನಾಗರಿಕನ ಪ್ರಜ್ಞೆಯು ದೇವರಿಂದ ದೇಶ ಮತ್ತು ರಾಮನಿಂದ ರಾಷ್ಟ್ರದವರೆಗೆ ವಿಸ್ತರಿಸಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com