ಪಾಟ್ನ: ಬಿಹಾರದಲ್ಲಿ ಮತ್ತೆ ಎನ್ ಡಿಎ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಲೋಕಸಭಾ ಚುನಾವಣೆ ಸನಿಹದಲ್ಲಿ ಸಂಭವಿಸಿದ ಬೆಳವಣಿಗೆಯಿಂದ ಬಿಜೆಪಿಯ ಶಕ್ತಿ ಹೆಚ್ಚಾಗಿದೆ.
ಬಿಹಾರದ ಹೊಸ ಸರ್ಕಾರದ ಬಗ್ಗೆ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಡಿಸಿಎಂ ಸಾಮ್ರಾಟ್ ಚೌಧರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ರಾಜ್ಯಕ್ಕೆ ಅನದಾನದ ಕೊರತೆಯಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಹಾರದಲ್ಲಿ ಉಂಟಾದ ಕ್ಷಿಪ್ರ ರಾಜಕೀಯ ಕ್ರಾಂತಿಯ ಪರಿಣಾಮವೇನು? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಚೌಧರಿ, ಈ ಬೆಳವಣಿಗೆ ಬರೊಬ್ಬರಿ ಲೆಕ್ಕಾಚಾರದ ನಡೆಯಾಗಿದ್ದು, ಬಿಜೆಪಿಗೆ ಸ್ವಾಭಾವಿಕ ಮಿತ್ರಪಕ್ಷವಾಗಿರುವ ಜೆಡಿಯು ಜೊತೆಯಲ್ಲಿ 2014 ರ ಲೋಕಸಭೆ ಹಾಗೂ 2015 ರ ವಿಧಾನಸಭೆ ಚುನಾವಣೆಗಳನ್ನು ಹೊರತುಪಡಿಸಿ 1996 ರಿಂದ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸಿದ್ದೇವೆ. ಈ ಎಲ್ಲಾ ಚುನಾವಣೆಗಳಲ್ಲೂ ಉತ್ತಮ ಫಲಿತಾಂಶ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಬಿಹಾರದಿಂದ ಮೈತ್ರಿಕೂಟಕ್ಕೆ ಎಲ್ಲಾ 40 ಕ್ಷೇತ್ರಗಳಲ್ಲೂ ಗೆಲುವು ಸಿಗಲಿದೆ ಎಂದು ಹೇಳಿದ್ದಾರೆ.
ಎನ್ ಡಿಎ ಸರ್ಕಾರದ ಸ್ಥಾಪನೆಯಿಂದ ಬಿಹಾರದಲ್ಲಿ ದಶಕದ ರಾಜಕೀಯ ಅಸ್ಥಿರತೆ ಅಂತ್ಯವಾಗಲಿದೆಯೇ?
ರಾಜ್ಯದಲ್ಲಿ ರಾಜಕೀಯ ಸ್ಥಿರತೆ ಇರಲಿದೆ. ಮಿತ್ರ ಪಕ್ಷಗಳು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿವೆ. ನಮಗೆ ಅಭಿವೃದ್ಧಿ ಸಾಮಾನ್ಯ ಕಾರ್ಯಕ್ರಮದ ಅಂಶವಾಗಿದೆ. ಈ ಹಿಂದೆ ಕೆಲವು ಪರಿಸ್ಥಿತಿಗಳಿಂದ ಮೈತ್ರಿ ಮುರಿದು ಬಿದ್ದಿತ್ತು ಈಗ ಹಿಂದೆಂದಿಗಿಂತಲೂ ಉತ್ತಮವಾದ ತಿಳುವಳಿಕೆಯನ್ನು ಪರಸ್ಪರ ಹೊಂದಿದ್ದೇವೆ, ಈಗ ಹಿಂತಿರುಗಿ ನೋಡುವ ಅಗತ್ಯವಿಲ್ಲ. ನಮಗೆ 2020 ರ ಚುನಾವಣೆಯಲ್ಲಿ ಜನಾದೇಶವಿತ್ತು ಎಂದು ಸಾಮ್ರಾಟ್ ಚೌಧರಿ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿಯೇ ಪಗಡಿ ತೆಗೆಯುವ ನಿಮ್ಮ ವೈಯಕ್ತಿಕ ಶಪಥದ ಕಥೆಯೇನು?
ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರವೇ ಪಗಡಿ ತೆಗೆಯುತ್ತೇನೆ ಎಂಬುದು ನನ್ನ ವೈಯಕ್ತಿಕ ಶಪಥವಾಗಿತ್ತು. ಆದರೆ ಕೆಲವೊಮ್ಮೆ ದೇಶ ಹಾಗೂ ಪಕ್ಷಕ್ಕಾಗಿ ವೈಯಕ್ತಿಕ ಅಭಿಪ್ರಾಯಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ನನಗೆ ಬಿಜೆಪಿ ಎಲ್ಲವನ್ನೂ ನೀಡಿದೆ. ನನಗೆ ಪಕ್ಷ ತಾಯಿ ಇದ್ದಂತೆ, ನಾನು ಪಕ್ಷಕ್ಕೆ ಋಣಿಯಾಗಿದ್ದೆನೆ, ಅಯೋಧ್ಯೆಗೆ ತೆರಳಿ ಭಗವಾನ್ ರಾಮನ ದರ್ಶನ ಪಡೆದು ಪಗಡಿ ತೆಗೆಯುತ್ತೇನೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಪದೇ ಪದೇ ಮೈತ್ರಿ ಬದಲಿಸುವ ಬಗ್ಗೆ ಏನು ಹೇಳುತ್ತೀರಿ?
ನಿತೀಶ್ ಕುಮಾರ್ ಅವರು ಇಂದು (ಎನ್ಡಿಎ) ಇರುವಂತೆಯೇ ಇರುತ್ತಾರೆ ಎಂದು ಹೇಳಿದ್ದಾರೆ. ಅವರು ಎಲ್ಲಿಯೂ ಹೋಗುವುದಿಲ್ಲ. ಈ ಬಾರಿ ಬಿಜೆಪಿಯೊಂದಿಗೆ ಕೈಜೋಡಿಸುವ ಪ್ರಸ್ತಾಪವಾಗಿದ್ದೇ ಜೆಡಿಯು ಪಕ್ಷದಿಂದ. ಪ್ರಸ್ತಾವನೆಯನ್ನು ನಮ್ಮ ಉನ್ನತ ನಾಯಕತ್ವಕ್ಕೆ ಮೂಲಕ ಕಳುಹಿಸಿ, ಅದನ್ನು ಸ್ವೀಕರಿಸಲಾಗಿದೆ.
Advertisement