ತ್ರಿಪುರಾದಲ್ಲಿ ಬುಡಕಟ್ಟು ಯುವಕನ ಸಾವಿನಿಂದ ಪರಿಸ್ಥಿತಿ ಉದ್ವಿಗ್ನ: ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ!
ತ್ರಿಪುರಾದ ಗಂಡಚೆರಾ ಪ್ರದೇಶದಲ್ಲಿ ನಿನ್ನೆ ರಾತ್ರಿ ಬುಡಕಟ್ಟು ಯುವಕನೋರ್ವ ಸಾವನ್ನಪ್ಪಿದ್ದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಇದಾದ ನಂತರ ಮತ್ತೊಂದು ಗುಂಪು ಅಂಗಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದೆ. ಸದ್ಯ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಜಿಲ್ಲಾಡಳಿತ ಇಡೀ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಿದ್ದು ಸಿಆರ್ಪಿಎಫ್ ಮತ್ತು ಟಿಎಸ್ಆರ್ ಸಿಬ್ಬಂದಿಯನ್ನು ನಿಯೋಜಿಸಿದೆ.
ಸ್ಥಳೀಯ ಮೂಲಗಳ ಪ್ರಕಾರ, ಶುಕ್ರವಾರ ಯುವಕನ ಸಾವಿನ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕೆಲ ದಿನಗಳ ಹಿಂದೆ ಜಾತ್ರೆಯಲ್ಲಿ ಯುವಕನೊಬ್ಬನಿಗೆ ಮತ್ತೊಂದು ಗುಂಪು ಥಳಿಸಿತ್ತು. ಗಾಯಾಳು ಯುವಕ ನಿನ್ನೆ ಅಗರ್ತಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆತನ ಶವವನ್ನು ಗಂಡಚೆರ್ರಾಕ್ಕೆ ಕೊಂಡೊಯ್ದಾಗ, ಸ್ಥಳದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಧಲೈ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾಜು ವಾಹಿದ್, "ಸಾವಿಗೆ ಕಾರಣರಾದ ಎಲ್ಲಾ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಶುಕ್ರವಾರ ಸಾವನ್ನಪ್ಪಿದ್ದನ್ನು. ಸದ್ಯ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು "ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸಿ ನಿಷೇಧಾಜ್ಞೆ ವಿಧಿಸಿದ್ದು ಇಂಟರ್ನೆಟ್ ಸ್ಥಗಿತಗೊಳಿಸಿದ್ದೇವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.
ಮೂಲಗಳ ಪ್ರಕಾರ, ಗಲಾಟೆಯ ನಂತರ ಬಂಗಾಳಿ ಸಮುದಾಯದ ಜನರು ತಮ್ಮ ಮನೆಗಳನ್ನು ತೊರೆದು ಕಾಡಿನಲ್ಲಿ ಆಶ್ರಯ ಪಡೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಜುಲೈ 9 ರಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯೇ ಈ ಘಟನೆಗೆ ನಿಜವಾದ ಕಾರಣ ಎಂದು ಹೇಳಲಾಗಿದ್ದು, ಯುವಕನನ್ನು ರಕ್ಷಿಸಲು ಮುಂದಾದ ಬುಡಕಟ್ಟು ಹುಡುಗನನ್ನು ಬಂಗಾಳಿ ಗುಂಪು ಮಾರಣಾಂತಿಕವಾಗಿ ಥಳಿಸಿತ್ತು. ಗಾಯಾಳುವನ್ನು ಚಿಕಿತ್ಸೆಗಾಗಿ ಜಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಆತ ನಿನ್ನೆ ಮೃತಪಟ್ಟಿದ್ದನು.
ಏತನ್ಮಧ್ಯೆ, ಶುಕ್ರವಾರ ಮಧ್ಯಾಹ್ನ ಪರಮೇಶ್ವರ್ ರಿಯಾಂಗ್ ಮೃತದೇಹವನ್ನು ಮನೆಗೆ ಕೊಂಡೊಯ್ಯುವ ವೇಳೆ ಪ್ರದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು. ಈ ಸಮಯದಲ್ಲಿ ಕ್ಷೋಭೆಗೊಳಗಾದ ಆದಿವಾಸಿಗಳು ಸಂಜೆ ಬಂಗಾಳಿ ಮಾತನಾಡುವ ವಸತಿ ಪ್ರದೇಶಗಳ ಮೇಲೆ ದಾಳಿ ಮತ್ತು ಧ್ವಂಸ ಮಾಡಲು ಪ್ರಾರಂಭಿಸಿದರು. ಈ ವೇಳೆ ಹಲವು ಪೊಲೀಸರು ಮತ್ತು ಬಿಎಸ್ಎಫ್ ಯೋಧರೂ ಗಾಯಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ