ಮಾಧವ್ ಗಾಡ್ಗೀಳ್ ಸಮಿತಿ 13 ವರ್ಷಗಳ ಹಿಂದೆ ನೀಡಿದ್ದ ವರದಿ ನಿರ್ಲಕ್ಷಿಸಿದ್ದೇ ವಯನಾಡ್ ಅನಾಹುತಕ್ಕೆ ಕಾರಣವೇ?

ವಯನಾಡಿನ ಗ್ರಾಮಗಳಾದ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳ ವೈತಿರಿ ತಾಲೂಕಿನಲ್ಲಿರುವ ಮೆಪ್ಪಾಡಿಯಲ್ಲಿ ಮಾರಣಾಂತಿಕ ಭೂಕುಸಿತ ಉಂಟಾಗಿದ್ದು ಸಮಿತಿಯು ಗುರುತಿಸಿರುವ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ (ESL) ಒಂದಾಗಿದೆ.
ಮಾಧವ್ ಗಾಡ್ಗೀಳ್ ಸಮಿತಿ 13 ವರ್ಷಗಳ ಹಿಂದೆ ನೀಡಿದ್ದ ವರದಿ ನಿರ್ಲಕ್ಷಿಸಿದ್ದೇ ವಯನಾಡ್ ಅನಾಹುತಕ್ಕೆ ಕಾರಣವೇ?
Updated on

2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಭೂಕುಸಿತ, ಇತ್ತೀಚೆಗಷ್ಟೇ ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ ಹಠಾತ್ ಭೂಕುಸಿತ, ಇಂದು ಕೇರಳದ ವಯನಾಡಿನಲ್ಲಿ ಆದ ಗುಡ್ಡ ಕುಸಿತ, ಭೂಕುಸಿತ ಪರಿಸರ ತಜ್ಞರನ್ನು ಮತ್ತೆ ಚರ್ಚೆಗೀಡುಮಾಡುವಂತೆ ಮಾಡಿದೆ.

ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿ ವರದಿಯಲ್ಲೇನಿದೆ?: ವಯನಾಡಿನ ಇಂದಿನ ಪ್ರಾಕೃತಿಕ ದುರಂತದ ನಂತರ 13 ವರ್ಷಗಳ ಹಳೆಯ ವರದಿ ಮುನ್ನಲೆಗೆ ಬಂದು ಹತ್ತು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ESAs) ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು 13 ವರ್ಷಗಳ ಹಿಂದೆಯೇ ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ಆಗಸ್ಟ್ 2011 ರಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಇಂದು ಭೂಕುಸಿತ ಸಂಭವಿಸಿದ ವಯನಾಡಿನ ಮೆಪ್ಪಾಡಿ ಹೆಸರು ಕೂಡ ವರದಿಯಲ್ಲಿದೆ. ಅಲ್ಲಿ ಪರಿಸರ ವಿರೋಧಿ ಚಟುವಟಿಕೆಗಳ ವಿರುದ್ಧ ಸಮಿತಿ ಅಂದೇ ಎಚ್ಚರಿಕೆ ನೀಡಿತ್ತು.

ಇಂದು ವಯನಾಡಿನ ಗ್ರಾಮಗಳಾದ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳ ವೈತಿರಿ ತಾಲೂಕಿನಲ್ಲಿರುವ ಮೆಪ್ಪಾಡಿಯಲ್ಲಿ ಮಾರಣಾಂತಿಕ ಭೂಕುಸಿತ ಉಂಟಾಗಿದ್ದು ಸಮಿತಿಯು ಗುರುತಿಸಿರುವ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ (ESL) ಒಂದಾಗಿದೆ.

ವರದಿ ನಗಣ್ಯ: ಇಲ್ಲಿಯವರೆಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಇದನ್ನು ಜಾರಿಗೆ ತರಲು ಉತ್ಸುಕರಾಗಿರಲಿಲ್ಲ. ಬದಲಿಗೆ ಪ್ರಸ್ತಾವನೆಗಳನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಕ್ರಮಗಳಿಗೆ ಮುಂದಾದವು. ತನ್ನ ವರದಿಯಲ್ಲಿ, ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟಗಳಾದ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳು ಮತ್ತು ವಲಯಗಳನ್ನು ವರ್ಗೀಕರಿಸಲು ಪ್ರಸ್ತಾಪಿಸಿದೆ.

ಪರಿಸರ ಸೂಕ್ಷ್ಮ ವಲಯಗಳು - I ಮತ್ತು ಪರಿಸರ ಸೂಕ್ಷ್ಮ ವಲಯಗಳು - II ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಸ್ಪಷ್ಟವಾದ ನಿರ್ಬಂಧಗಳು ಮತ್ತು ನಿಬಂಧನೆಗಳು ಇದ್ದವು.

ನಾವು ಪರಿಸರ ಸೂಕ್ಷ್ಮ ವಲಯಗಳು-I ರಲ್ಲಿ ಕಲ್ಲುಗಣಿಗಾರಿಕೆ ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು ಎಂದು ಪ್ರಸ್ತಾಪಿಸಿದ್ದೇವೆ. ಹಾಗೆಯೇ ಕಲ್ಲುಗಣಿಗಾರಿಕೆಗೆ ಅನುಮತಿ ಇರುವ ಪ್ರದೇಶಗಳಲ್ಲಿ, ಕ್ವಾರಿಗಳು ಜನವಸತಿಯಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಎಂದು ನಾವು ಸೂಚಿಸಿದ್ದೇವೆ. ಆದರೆ, ನಂತರ ಬಂದ ಸರ್ಕಾರಗಳು ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಕೇವಲ 50 ಮೀಟರ್‌ಗಳಷ್ಟು ದೂರ ಅಂತರ ಇಟ್ಟುಕೊಂಡು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿತು ಎಂದು WGEEP ಸದಸ್ಯ ಪರಿಸರವಾದಿ ವಿಎಸ್ ವಿಜಯನ್ ಹೇಳುತ್ತಾರೆ.

ಕೇಂದ್ರ ಸರ್ಕಾರವು ನಂತರ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿತು. ಮತ್ತೊಂದು ವರದಿಯನ್ನು ತರಲು ಕಸ್ತೂರಿರಂಗನ್ ನೇತೃತ್ವದ ಮತ್ತೊಂದು ಸಮಿತಿಯನ್ನು ನೇಮಿಸಿತು. ಗಾಡ್ಗೀಳ್ ಸಮಿತಿಯು ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಇಎಸ್‌ಎ ಎಂದು ಸೂಚಿಸಲು ಶಿಫಾರಸು ಮಾಡಿತ್ತು. ಆದಾಗ್ಯೂ, ಕಸ್ತೂರಿರಂಗನ್ ಸಮಿತಿಯು ಪಶ್ಚಿಮ ಘಟ್ಟಗಳ ಇಎಸ್ಎ ವ್ಯಾಪ್ತಿಯನ್ನು ಶೇಕಡಾ 37ಕ್ಕೆ ಇಳಿಸಿತು.

ಮಾಧವ್ ಗಾಡ್ಗೀಳ್ ಸಮಿತಿ 13 ವರ್ಷಗಳ ಹಿಂದೆ ನೀಡಿದ್ದ ವರದಿ ನಿರ್ಲಕ್ಷಿಸಿದ್ದೇ ವಯನಾಡ್ ಅನಾಹುತಕ್ಕೆ ಕಾರಣವೇ?
Wayanad landslide: ಮೃತಪಟ್ಟವರ ಸಂಖ್ಯೆ 96ಕ್ಕೆ ಏರಿಕೆ; ನಾಲ್ಕು ಗ್ರಾಮ ನೆಲಸಮ; ಹಲವರು ಸಿಲುಕಿರುವ ಶಂಕೆ

ಆಗ ಉಮ್ಮನ್ ಚಾಂಡಿ ನೇತೃತ್ವದ ಕೇರಳ ರಾಜ್ಯ ಸರ್ಕಾರವು ಡಬ್ಲ್ಯುಜಿಇಇಪಿ ವರದಿಯನ್ನು ವಿರೋಧಿಸಿ ಸ್ವತಂತ್ರ ವರದಿಯನ್ನು ತರಲು ಉಮ್ಮನ್ ವಿ ಉಮ್ಮನ್ ನೇತೃತ್ವದ ಮತ್ತೊಂದು ಸಮಿತಿಗೆ ಒಪ್ಪಿಸಿತ್ತು. ಆ ಸಮಯದಲ್ಲಿ, ಗಾಡ್ಗೀಳ್ ವರದಿಯ ಅನುಷ್ಠಾನಕ್ಕೆ ಒಲವು ತೋರಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿಟಿ ಥಾಮಸ್ ಒಬ್ಬರು.

ವಾಸ್ತವವಾಗಿ, ಗಾಡ್ಗೀಳ್ ವರದಿಯು ಪಶ್ಚಿಮ ಘಟ್ಟಗಳ ಪರಿಸರ ಪ್ರಾಮುಖ್ಯತೆಯನ್ನು ಗುರುತಿಸಿದೆ. ಆದರೆ, ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ಸರ್ಕಾರಗಳು ಅದನ್ನು ವಿರೋಧಿಸಿದವು. ಪರಿಸರ ದುರ್ಬಲ ಪ್ರದೇಶವನ್ನು ಕೇವಲ ಸರ್ಕಾರಿ ಆದೇಶದಿಂದ ದುರ್ಬಲವಲ್ಲ ಎಂದು ಹೇಗೆ ಕರೆಯಬಹುದು, ಈಗಿನ ಎಡ ಸರಕಾರವು ಅದರ ಭಾಗವಾಗಿಯೇ ಅಕ್ರಮ ಕಲ್ಲುಗಣಿಗಾರಿಕೆಯನ್ನು ಸಕ್ರಮಗೊಳಿಸುವ ಪ್ರಯತ್ನವನ್ನು ಮಾಡಿರುವುದು ಸರಿಯಾದ ನಿರ್ಧಾರವಲ್ಲ ಎಂದು ಇಡುಕ್ಕಿಯಲ್ಲಿ 1,500 ಚದರ ಅಡಿವರೆಗಿನ ಅನಧಿಕೃತ ನಿರ್ಮಾಣಗಳನ್ನು ಸರ್ಕಾರ ಕ್ರಮಬದ್ಧಗೊಳಿಸಿದ ನಂತರ ಥಾಮಸ್ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

WGEEP ವರದಿಯ ಪ್ರಕಾರ ಕೇರಳ ರಾಜ್ಯದ ಪರಿಸರ ಸೂಕ್ಷ್ಮ ಸ್ಥಳಗಳು

■ ಮಂಡಕೋಲ್

■ ಪಣತ್ತಡಿ

■ ಪೈತಲ್ಮಲ

■ ಬ್ರಹ್ಮಗಿರಿ - ತಿರುನೆಲ್ಲಿ

■ ವಯನಾಡ್

■ ಬಾಣಾಸುರ ಸಾಗರ್ - ಕುಟ್ಟಿಯಾಡಿ

■ ನಿಲಂಬೂರ್ - ಮೇಪಾಡಿ

■ ಸೈಲೆಂಟ್ ವ್ಯಾಲಿ - ಹೊಸ ಅಮರಂಬಲಂ

■ ಸಿರುವಣಿ

■ ನೆಲ್ಲಿಯಂಪತಿ

■ ಪೀಚಿ - ವಝನಿ

■ ಅತಿರಪಿಲ್ಲಿ - ವಜಚಲ್

■ ಪೂಯಂಕುಟ್ಟಿ - ಮುನ್ನಾರ್

■ ಏಲಕ್ಕಿ ಬೆಟ್ಟಗಳು

■ ಪೆರಿಯಾರ್

■ ಕುಲತುಪುಳ

■ ಅಗಸ್ತ್ಯ ಮಾಲಾ

■ ಸಂರಕ್ಷಿತ ಪ್ರದೇಶಗಳ ಸುತ್ತಮುತ್ತಲಿನ ESAಗಳು

ಪರಿಸರ ಸೂಕ್ಷ್ಮ ವಲಯಗಳು-ESZI, II ಪ್ರದೇಶಗಳು

ಗಾಡ್ಗೀಳ್ ನೇತೃತ್ವದ ಸಮಿತಿಯ ವರದಿಯ ಪ್ರಕಾರ, ವೈತಿರಿ, ಮಾನಂತವಾಡಿ ಮತ್ತು ಸುಲ್ತಾನ್ ಬತ್ತೇರಿಗಳು ESZ - I ಅಡಿಯಲ್ಲಿ ಬರುತ್ತವೆ.

ಅದೇ ರೀತಿ ಮಲಪ್ಪುರಂನ ಪೆರಿಂತಲ್ಮನ್ನಾ ಮತ್ತು ತಿರೂರ್ ತಾಲೂಕುಗಳು ESZ - II ಅಡಿಯಲ್ಲಿ ಬರುವ ಪ್ರದೇಶಗಳಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com