
ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಒಂದು ವಾರ ಮುಂಚಿತವಾಗಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು. 10, ರಾಜಾಜಿ ಮಾರ್ಗ್ ನಿವಾಸದಲ್ಲಿ ಖರ್ಗೆ ಅವರನ್ನು ರಿಜಿಜು ಭೇಟಿಯಾಗಿದ್ದು, ಇದು ಒಂದು ಸೌಜನ್ಯಯುತ ಭೇಟಿ ಎಂದು ಹೇಳಲಾಗಿದೆ.
ಖರ್ಗೆ ಅವರೊಂದಿಗೆ ಸಭೆಯ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಿರಣ್ ರಿಜಿಜು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಆಹ್ಲಾದಕರ ಸೌಜನ್ಯಯುತ ಸಭೆ ನಡೆಸಿದ್ದೇನೆ. ಅವರು ತಮ್ಮ ಜೀವನದ ಹಲವು ಅಮೂಲ್ಯ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡರು. ನಾವೆಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ ವಾರ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಿಜಿಜು, ಸಂಖ್ಯಾಬಲದ ಆಧಾರದ ಮೇಲೆ ಸರ್ಕಾರ ಅಥವಾ ಪ್ರತಿಪಕ್ಷಗಳು ಪರಸ್ಪರ ಕೆಳಗಿಳಿಯುವ ಅಗತ್ಯವಿಲ್ಲ. ಸಂಸತ್ತಿನ ಸುಗಮ ಕಾರ್ಯನಿರ್ವಹಣೆಗಾಗಿ ಎಲ್ಲರನ್ನೂ ಸಂಪರ್ಕಿಸುವುದಾಗಿ ಹೇಳಿದ್ದರು.
18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಂದು ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಲೋಕಸಭೆಯ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಮತ್ತು ಸ್ಪೀಕರ್ ಆಯ್ಕೆಯಾಗುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂನ್ 27 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಮುಂದಿನ ಐದು ವರ್ಷಗಳ ಹೊಸ ಸರ್ಕಾರದ ಮಾರ್ಗಸೂಚಿಯನ್ನು ರೂಪಿಸುವ ಸಾಧ್ಯತೆಯಿದೆ.
ಜುಲೈ 3 ರಂದು ಅಧಿವೇಶನ ಮುಕ್ತಾಯವಾಗಲಿದೆ. ಅಧಿವೇಶನದ ಮೊದಲ ಮೂರು ದಿನಗಳಲ್ಲಿ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಮತ್ತು ಕೆಳಮನೆಯ ಸ್ಪೀಕರ್ ಅನ್ನು ಆಯ್ಕೆ ಮಾಡುತ್ತಾರೆ.ಕೇಂದ್ರ ಬಜೆಟ್ ಮಂಡನೆಗಾಗಿ ಸಂಸತ್ತಿನ ಎರಡೂ ಸದನಗಳು ಜುಲೈ ಮೂರನೇ ವಾರದಲ್ಲಿ ಮತ್ತೆ ಸೇರುವ ನಿರೀಕ್ಷೆಯಿದೆ.
Advertisement