ವಿಪರೀತ ಬಿಸಿಗಾಳಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸುವಂತೆ ಜೆಪಿ ನಡ್ಡಾ ಸೂಚನೆ
ನವದೆಹಲಿ: ಉತ್ತರ ಭಾರತದಲ್ಲಿ ಬಿಸಿಗಾಳಿ ವಿಪರೀತ ಹೆಚ್ಚಾಗುತ್ತಿದ್ದು, ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಬುಧವಾರ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸುವಂತೆ ಸೂಚನೆ ನೀಡಿದ್ದಾರೆ.
ಕೇಂದ್ರದಿಂದ ನಡೆಸಲ್ಪಡುವ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು, ಬಿಸಿಲಿನ ಆಘಾತಕ್ಕೊಳಗಾಗಿರುವ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದರು. ಅಲ್ಲದೆ ವಿಶೇಷ ಹೀಟ್ ವೇವ್ ಘಟಕ ಆರಂಭಿಸುವಂತೆ ಆದೇಶಿಸಿದ್ದಾರೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜನರು ಬಿಸಿಲಿನ ಹೊಡೆತಗಳು ಮತ್ತು ಇತರ ಶಾಖ-ಸಂಬಂಧಿತ ಸಮಸ್ಯೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೀಟ್ ಸ್ಟ್ರೋಕ್ ನಿಂದ ಬಳಲುತ್ತಿರುವ ರೋಗಿಗಳನ್ನು ದಾಖಲಿಸಿಕೊಳ್ಳಲು ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಶಂಕಿತ ಹೀಟ್ ಸ್ಟ್ರೋಕ್ ನಿಂದ ಐದು ಸಾವುಗಳು ವರದಿಯಾಗಿದ್ದು, ಕನಿಷ್ಠ 12 ಜನರು, ಬಹುತೇಕ ದಿನಗೂಲಿ ಕಾರ್ಮಿಕರು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ದೆಹಲಿಯ ಇತರ ಆಸ್ಪತ್ರೆಗಳಲ್ಲಿಯೂ ಇದೇ ರೀತಿ ಬಿಸಿಲಿನ ಆಘಾತಕ್ಕೊಳಗಾದ ವಿವಿಧ ರೋಗಿಗಳು ದಾಖಲಾಗಿದ್ದಾರೆ.
ದೆಹಲಿಯ ನಿವಾಸಿಗಳು ಸುಮಾರು ಒಂದು ತಿಂಗಳಿನಿಂದ ನಿರಂತರವಾಗಿ ಶಾಖದ ಅಲೆಯಲ್ಲಿ ತತ್ತರಿಸಿದ್ದಾರೆ. ನಗರದಲ್ಲಿನ ಕನಿಷ್ಠ ತಾಪಮಾನವು 35 ಡಿಗ್ರಿ ಸೆಲ್ಶಿಯಸ್ ಅನ್ನು ದಾಟಿದೆ. ಇಲ್ಲಿ ಗರಿಷ್ಠ ತಾಪಮಾನವು 45 ಡಿಗ್ರಿ ಆಗಿದೆ. ನಲ್ಲಿ ನೀರು ದಿನವಿಡೀ ಬಿಸಿಯಾಗಿರುತ್ತದೆ ಮತ್ತು ಹವಾನಿಯಂತ್ರಣಗಳು ಕೂಲಿಂಗ್ ನೀಡದ ಪರಿಸ್ಥಿತಿಯಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ