ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತ ಬಿಆರ್ಎಸ್ ನಾಯಕಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶನಿವಾರ ನ್ಯಾಯಾಲಯ ಮುಂದೆ ಹಾಜರುಪಡಿಸಿದೆ.
ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್ ಅವರ ಮುಂದೆ ಹಾಜರುಪಡಿಸಿದ್ದು, ಅವರು ಶೀಘ್ರದಲ್ಲೇ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ನಾವು ನ್ಯಾಯಾಲಯ ಮುಂದೆ ಹೋರಾಟ ನಡೆಸುತ್ತೇವೆ ಎಂದು ಬಿಆರ್ಎಸ್ ನಾಯಕಿ ಕವಿತಾ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ಸಂಜೆ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಅವರ ನಿವಾಸದಿಂದ ಕೇಂದ್ರ ತನಿಖಾ ಸಂಸ್ಥೆ ಬಂಧಿಸಿ ದೆಹಲಿಗೆ ಕರೆತಂದಿತ್ತು. ಜಾರಿ ನಿರ್ದೇಶನಾಲಯ 10 ದಿನಗಳ ಕಸ್ಟಡಿಗೆ ನ್ಯಾಯಾಲಯವನ್ನು ಕೋರುವ ಸಾಧ್ಯತೆಯಿದೆ.
2021-22 ರ ದೆಹಲಿಯ ಅಬಕಾರಿ ನೀತಿಯ ಅಡಿಯಲ್ಲಿ ಮದ್ಯ ವ್ಯಾಪಾರಿಗಳ "ಸೌತ್ ಗ್ರೂಪ್" ಲಾಬಿಗೆ ಕವಿತಾ ಸಂಪರ್ಕ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಅವರು ಶರತ್ ರೆಡ್ಡಿ, ಕವಿತಾ ಮತ್ತು ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ನಿಯಂತ್ರಣದಲ್ಲಿರುವ "ಸೌತ್ ಗ್ರೂಪ್" ನಿಂದ ಎಎಪಿ ನಾಯಕರ ಪರವಾಗಿ ಕನಿಷ್ಠ 100 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿದ್ದಾರೆ ಎಂದು ಅದು ಆರೋಪಿಸಿದೆ.
Advertisement