JNUSU ಚುನಾವಣೆಯಲ್ಲಿ ಎಬಿವಿಪಿಗೆ ಸೋಲು; 3 ದಶಕಗಳ ನಂತರ ಮೊದಲ ದಲಿತ ಅಧ್ಯಕ್ಷರಾಗಿ ಧನಂಜಯ್ ಆಯ್ಕೆ!
ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟವು (ಜೆಎನ್ಯುಎಸ್ಯು) ಸುಮಾರು ಮೂರು ದಶಕಗಳ ನಂತರ ಎಡ-ಬೆಂಬಲಿತ ಗುಂಪುಗಳಿಂದ ತನ್ನ ಮೊದಲ ದಲಿತ ಅಧ್ಯಕ್ಷರನ್ನು ಭಾನುವಾರ ಆಯ್ಕೆ ಮಾಡಿದೆ. ಜೆಎನ್ಯುಎಸ್ಯು ಚುನಾವಣೆಯಲ್ಲಿ ತನ್ನ ಎಡಗುಂಪುಗಳ ಸಮಿತಿ ತನ್ನ ಸಮೀಪದ ಪ್ರತಿಸ್ಪರ್ಧಿ ಆರ್ಎಸ್ಎಸ್ ಸಂಯೋಜಿತ ಎಬಿವಿಪಿಯನ್ನು ಸೋಲಿಸಿ ಕ್ಲೀನ್ ಸ್ವೀಪ್ ಮಾಡಿದೆ.
ನಾಲ್ಕು ವರ್ಷಗಳ ವಿರಾಮದ ನಂತರ ನಡೆದ ಚುನಾವಣೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್ಎ) ಧನಂಜಯ್ ಅವರು 1,676 ಮತಗಳನ್ನು ಗಳಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ (ಎಬಿವಿಪಿ) ಉಮೇಶ್ ಸಿ ಅಜ್ಮೀರಾ ವಿರುದ್ಧ 2,598 ಮತಗಳನ್ನು ಪಡೆಯುವ ಮೂಲಕ ಜೆಎನ್ಯುಎಸ್ಯು ಅಧ್ಯಕ್ಷ ಸ್ಥಾನವನ್ನು ಗೆದ್ದರು. ಧನಂಜಯ್ ಬಿಹಾರದ ಗಯಾ ಮೂಲದವರಾಗಿದ್ದು, 1996-97ರಲ್ಲಿ ಚುನಾಯಿತರಾದ ಬಟ್ಟಿ ಲಾಲ್ ಬೈರ್ವಾ ನಂತರ ಎಡಪಕ್ಷದಿಂದ ಮೊದಲ ದಲಿತ ಅಧ್ಯಕ್ಷರಾಗಿದ್ದಾರೆ.
ಗೆಲುವಿನ ನಂತರ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಧನಂಜಯ್, "ಈ ಗೆಲುವು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ತಿರಸ್ಕರಿಸುವ ಜಿಎನ್ ಯು ವಿದ್ಯಾರ್ಥಿಗಳ ಜನಾಭಿಪ್ರಾಯವಾಗಿದೆ. ವಿದ್ಯಾರ್ಥಿಗಳು ಮತ್ತೊಮ್ಮೆ ನಮ್ಮ ಮೇಲೆ ವಿಶ್ವಾಸವನ್ನು ತೋರಿಸಿದ್ದಾರೆ. ನಾವು ಅವರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸಲಿದ್ದು, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳತ್ತ ಗಮನ ಹರಿಸುವುದಾಗಿ ತಿಳಿಸಿದರು. ಶುಕ್ರವಾರ ನಡೆದ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಳೆದ 12 ವರ್ಷಗಳಲ್ಲೇ ಅತಿ ಹೆಚ್ಚು ಶೇ.73ರಷ್ಟು ಮತದಾನವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ