ಹೈದರಾಬಾದ್: ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತರನ್ನು ತೊಡಗಿಸಿಕೊಳ್ಳುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ನಗರ ಪೊಲೀಸರು ಶುಕ್ರವಾರ ಕೇಸ್ ದಾಖಲಿಸಿದ್ದಾರೆ.
ಟಿ ಯಮನ್ ಸಿಂಗ್, ಹಿರಿಯ ಬಿಜೆಪಿ ನಾಯಕ ಜಿ ಕಿಶನ್ ರೆಡ್ಡಿ ಮತ್ತು ಶಾಸಕ ಟಿ ರಾಜಾ ಸಿಂಗ್ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.
ಮೇ 1 ರಂದು ಲಾಲ್ದವಾಜಾದಿಂದ ಸುಧಾ ಟಾಕೀಸ್ವರೆಗೆ ನಡೆದ ಬಿಜೆಪಿ ರ್ಯಾಲಿಯಲ್ಲಿ ಅಮಿತ್ ಶಾ ಅವರೊಂದಿಗೆ ಮಕ್ಕಳು ಇದ್ದರು ಎಂದು ಆರೋಪಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಉಪಾಧ್ಯಕ್ಷ ನಿರಂಜನ್ ರೆಡ್ಡಿ ಅವರು ತೆಲಂಗಾಣ ಮುಖ್ಯ ಚುನಾವಣಾಧಿಕಾರಿ(ಸಿಇಒ)ಗೆ ದೂರು ನೀಡಿದ್ದರು.
ಬಿಜೆಪಿ ಚಿಹ್ನೆಯೊಂದಿಗೆ ವೇದಿಕೆಯಲ್ಲಿ ಮಕ್ಕಳು ಇರುವುದು ಕಂಡುಬಂದಿದ್ದು, ಇದು ಚುನಾವಣಾ ಆಯೋಗದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಹೈದರಾಬಾದ್ ಲೋಕಸಭಾ ಕ್ಷೇತ್ರದ ಲಾಲ್ದರ್ವಾಜಾದಿಂದ ಸುಧಾ ಟಾಕೀಸ್ವರೆಗೆ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ, ರಾಜಕೀಯ ಮುಖಂಡರ ಜೊತೆಯಲ್ಲಿ ಮಕ್ಕಳು ಇರುವುದನ್ನು ಗಮನಿಸಲಾಗಿದ್ದು, ಕೆಲವು ಮಕ್ಕಳು ಬಿಜೆಪಿ ಚಿಹ್ನೆಯನ್ನು ಪ್ರದರ್ಶಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Advertisement