ನವದೆಹಲಿ: ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ತಮ್ಮ ಪಕ್ಷಕ್ಕೆ ಕಪ್ಪುಹಣ ಕಳುಹಿಸಿದ್ದಾರೆಯೇ ಎಂಬ ಬಗ್ಗೆ ಸಿಬಿಐ ಅಥವಾ ಇಡಿ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸವಾಲು ಹಾಕಿದ್ದಾರೆ.
ಕಳೆದ ಐದು ವರ್ಷಗಳಿಂದ ಅದಾನಿ- ಅಂಬಾನಿ ವಿಷಯ ಪ್ರಸ್ತಾಪಿಸುತ್ತಿದ್ದ ಶಹಜಾದ್(ರಾಹುಲ್ ಗಾಂಧಿ) ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಅವರ ಹೆಸರನ್ನು ಪ್ರಸ್ತಾಪಿಸುವುದನ್ನು ಏಕೆ ನಿಲ್ಲಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಟೆಂಪೋಗಳಲ್ಲಿ ಕಪ್ಪು ಹಣದ ಎಷ್ಟು ಮೂಟೆಗಳನ್ನು ನೀವು ಪಡೆದಿದ್ದೀರಿ ಎಂದು ದೇಶಕ್ಕೆ ಉತ್ತರಿಸಬೇಕಿದೆ ಎಂದು ಚುನಾವಣಾ ಭಾಷಣದ ವೇಳೆ ಪ್ರಧಾನಿ ಮೋದಿ ಹೇಳಿದ್ದರು.
ಇಂದು ಮೋದಿ ಹೇಳಿಕೆಗೆ ವಿಡಿಯೋ ಮೂಲಕ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ಮೋದಿ ಅವರು "ಮನಿ ಇನ್ ಎ ಟೆಂಪೋ" "ವೈಯಕ್ತಿಕ ಅನುಭವ" ದಿಂದ ಮಾತನಾಡುತ್ತಿದ್ದರೆ ವ್ಯಂಗ್ಯವಾಡಿದ್ದಾರೆ.
"ಮೋದಿ ಜೀ, ನೀವು ಸ್ವಲ್ಪ ಹೆದರಿದ್ದೀರಾ? ನೀವು ಸಾಮಾನ್ಯವಾಗಿ ಮುಚ್ಚಿದ ಬಾಗಿಲಿನ ಹಿಂದೆ ಅದಾನಿ ಮತ್ತು ಅಂಬಾನಿ ಬಗ್ಗೆ ಮಾತನಾಡುತ್ತೀರಿ. ಆದರೆ ನೀವು ಮೊದಲ ಬಾರಿಗೆ ಸಾರ್ವಜನಿಕವಾಗಿ ಅದಾನಿ ಮತ್ತು ಅಂಬಾನಿ ಬಗ್ಗೆ ಮಾತನಾಡಿದ್ದೀರಿ" ಎಂದು ವೀಡಿಯೊ ಸಂದೇಶದಲ್ಲಿ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
"ಅವರು ಟೆಂಪೋದಲ್ಲಿ ಹಣ ಕೊಡುತ್ತಾರೆ ಎಂಬುದು ನಿಮಗೂ ಗೊತ್ತು. ಇದು ನಿಮ್ಮ ವೈಯಕ್ತಿಕ ಅನುಭವವೇ?" ಎಂದು ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
"ಒಂದು ಕೆಲಸ ಮಾಡಿ - ಸಿಬಿಐ, ಇಡಿ ಅವರ ಬಳಿಗೆ ಕಳುಹಿಸಿ ಮತ್ತು ಸಮಗ್ರ ತನಿಖೆ ನಡೆಸಿ, ಹೆದರಬೇಡಿ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Advertisement