ಭಾರತ ವಿರೋಧಿ ನಿಲುವು ಅನುಸರಿಸಬಾರದಿತ್ತು: ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ವಿಷಾದ

ಭಾರತದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಇಂದು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದರು.
ಮೂಸಾ ಜಮೀರ್-ಎಸ್ ಜೈಶಂಕರ್
ಮೂಸಾ ಜಮೀರ್-ಎಸ್ ಜೈಶಂಕರ್

ನವದೆಹಲಿ: ಭಾರತದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಇಂದು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದರು.

ನವದೆಹಲಿಯಲ್ಲಿ ಭಾರತೀಯ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಮೂಸಾ ಜಮೀರ್ ಭೇಟಿಯಾದರು. ಈ ಅವಧಿಯಲ್ಲಿ ಇಬ್ಬರೂ ದಿಗ್ಗಜರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಿದರು. ಮೂಸಾ ಜಮೀರ್ ಅವರ ಭಾರತ ಭೇಟಿಯನ್ನು ಹಲವು ವಿಧಗಳಲ್ಲಿ ವಿಶೇಷವೆಂದು ಪರಿಗಣಿಸಲಾಗುತ್ತಿದೆ. ಆರು ತಿಂಗಳ ಹಿಂದೆ ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅವರು 'ಇಂಡಿಯಾ ಔಟ್' ಅಭಿಯಾನವನ್ನು ನಡೆಸಿದರು. ಮುಯಿಝು ಚೀನಾದ ಪರ ಇರುವಷ್ಟೇ ಭಾರತ ವಿರೋಧಿಯೂ ಹೌದು. ಇತ್ತೀಚೆಗೆ ಮಾಲ್ಡೀವ್ಸ್ ಮತ್ತು ಚೀನಾ ನಡುವೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಮಧ್ಯೆ ಮಾಲ್ಡೀವ್ಸ್ ವಿದೇಶಾಂಕ ಸಚಿವರು ಭಾರತಕ್ಕೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಮೊಹಮ್ಮದ್ ಮುಯಿಝು ಕಳೆದ ವರ್ಷ ನವೆಂಬರ್‌ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 'ಇಂಡಿಯಾ ಔಟ್' ಅಭಿಯಾನದ ಜೊತೆಗೆ, ಮುಯಿಜ್ಜು ಭಾರತೀಯ ಯೋಧರನ್ನು ಮಾಲ್ಡೀವ್ಸ್ ತೊರೆಯುವಂತೆ ಕೇಳಿಕೊಂಡಿದ್ದರು. ಇದಕ್ಕಾಗಿ ಮೇ 10ರವರೆಗೆ ಗಡುವು ನೀಡಲಾಗಿತ್ತು. ಇದಾದ ಬಳಿಕ ಭಾರತ ಕೂಡ ತನ್ನ 51 ಸೈನಿಕರನ್ನು ವಾಪಸ್ ಕರೆಸಿಕೊಂಡಿದೆ. ಮುಯಿಝು ಅವರ ಭಾರತ ವಿರೋಧಿ ನಿಲುವು ಮತ್ತು ಅವರ ನಿರ್ಧಾರಗಳ ವಿರುದ್ಧ ಭಾರತದಲ್ಲಿನ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಖ್ಯಾತನಾಮರು ಮಾಲ್ಡೀವ್ಸ್ ಪ್ರವಾಸವನ್ನು ಬಹಿಷ್ಕರಿಸಿದರು. ಇದರ ಪರಿಣಾಮ ಮಾಲ್ಡೀವ್ಸ್ ಪ್ರವಾಸೋದ್ಯಮ ಕುಂಠಿತವಾಗಿ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಿತ್ತು. ಈಗ ಮುಯಿಝು ತನ್ನ ತಪ್ಪನ್ನು ಅರಿತುಕೊಂಡಂತೆ ಕಾಣುತ್ತಿದೆ.

ಮೂಸಾ ಜಮೀರ್-ಎಸ್ ಜೈಶಂಕರ್
ಮಾಲ್ಡೀವ್ಸ್ ಸಂಸತ್ ಚುನಾವಣೆ: ಚೀನಾ ಬೆಂಬಲಿತ ಮುಯಿಝಗೆ ಭರ್ಜರಿ ಗೆಲುವು, ಭಾರತದ ಪರ MDPಗೆ ಹೀನಾಯ ಸೋಲು!

ವಾಸ್ತವವಾಗಿ, ಮಾಲ್ಡೀವ್ಸ್ ವಿವಾದ ಉಲ್ಬಣಗೊಂಡ ನಂತರ, ಭಾರತೀಯರು ಮತ್ತು ಸೆಲೆಬ್ರಿಟಿಗಳು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿದರು. ಅಲ್ಲದೆ ಬುಕಿಂಗ್ ಅನ್ನು ರದ್ದುಗೊಳಿಸಿದರು. ಅದೇ ಸಮಯದಲ್ಲಿ ಭಾರತವು ಮಾಲ್ಡೀವ್ಸ್ ಗೆ ನೀಡುತ್ತಿದ್ದ ಬೆಂಬಲವನ್ನು ನಿಲ್ಲಿಸಿತು. ಇದರಿಂದಾಗಿ ಮಾಲ್ಡೀವ್ಸ್ ಸ್ಥಿತಿ ಹದಗೆಡತೊಡಗಿತು. ವರದಿಯ ಪ್ರಕಾರ, ಇತ್ತೀಚೆಗೆ ಮುಯಿಝು ಅವರು ಮಾಲ್ಡೀವ್ಸ್ ಅಭಿವೃದ್ಧಿಗೆ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗವಾಗಿ ಮನವಿ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸಲು ಮತ್ತು ಹಳೆಯ ಸಹಕಾರವನ್ನು ಪುನಃಸ್ಥಾಪಿಸಲು ಮುಯಿಝು ತನ್ನ ವಿದೇಶಾಂಗ ಸಚಿವರನ್ನು ನವದೆಹಲಿಗೆ ಕಳುಹಿಸಿದ್ದಾರೆ ಎಂದು ನಂಬಲಾಗಿದೆ.

ಭಾರತದೊಂದಿಗೆ ಸಂಬಂಧವನ್ನು ಬಲಪಡಿಸಲು ಒತ್ತು

ದೆಹಲಿ ತಲುಪಿದ ತಕ್ಷಣ ಮೂಸಾ ಜಮೀರ್ Xನಲ್ಲಿ ಪೋಸ್ಟ್ ಮಾಡಿದ್ದು, ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ಬಗ್ಗೆ ಒತ್ತಿ ಹೇಳಿದರು. ಭಾರತಕ್ಕೆ ನನ್ನ ಮೊದಲ ದ್ವಿಪಕ್ಷೀಯ ಅಧಿಕೃತ ಭೇಟಿಗಾಗಿ ನಾನು ಬಂದಿದ್ದೇನೆ. ನಾನು ಭಾರತದೊಂದಿಗೆ ಉತ್ಪಾದಕ ಸಂವಾದವನ್ನು ಎದುರು ನೋಡುತ್ತಿದ್ದೇನೆ. ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಮತ್ತು ರೋಮಾಂಚಕ ಭಾರತೀಯ ಸಂಸ್ಕೃತಿಯನ್ನು ಅನುಭವಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. "ಇದು ಉತ್ತಮ ಭೇಟಿ. ನನ್ನನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಲಾಯಿತು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ನಾನು ಸಕಾರಾತ್ಮಕ ಮಾತುಕತೆ ನಡೆಸಿದ್ದೇವೆ. ನಾನು ಭಾರತ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನಿಜವಾಗಿಯೂ ಧನ್ಯವಾದ ಹೇಳುತ್ತೇನೆ.

ಭಾರತಕ್ಕೆ ನೆರೆಹೊರೆ ದೇಶಗಳು ಮೊದಲು: ಎಸ್ ಜೈಶಂಕರ್

ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, "ಭಾರತವು ಯಾವಾಗಲೂ ನೆರೆಹೊರೆ ಮೊದಲು ಎಂಬ ನೀತಿಯನ್ನು ಅನುಸರಿಸುತ್ತದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ಹಿತಾಸಕ್ತಿಗಳನ್ನು ಆಧರಿಸಿವೆ. ಮಾಲ್ಡೀವ್ಸ್ನೊಂದಿಗೆ ಸಹಕರಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಸೇರಿದೆ. ನಮ್ಮ ಹಲವು ಯೋಜನೆಗಳು ಮಾಲ್ಡೀವ್ಸ್ ಜನರಿಗೆ ಪ್ರಯೋಜನವನ್ನು ನೀಡಿವೆ. ಭಾರತವು ಅನೇಕ ಸಂದರ್ಭಗಳಲ್ಲಿ ಮಾಲ್ಡೀವ್ಸ್‌ಗೆ ಆರ್ಥಿಕ ನೆರವು ನೀಡಿದೆ ಎಂದು ಜೈಶಂಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com