
ಮುಂಬೈ: ಮುಂಬೈನಲ್ಲಿ ಹೋರ್ಡಿಂಗ್ ಕುಸಿದು 16 ಮಂದಿ ಸಾವನ್ನಪ್ಪಿದ ಪ್ರದೇಶದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿರುವುದು ಅಮಾನವೀಯ ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಗುರುವಾರ ಕಿಡಿಕಾರಿದ್ದಾರೆ.
ಘಾಟ್ಕೋಪರ್ ಪಶ್ಚಿಮದಿಂದ ಘಾಟ್ಕೋಪರ್ ಪೂರ್ವಕ್ಕೆ ಪ್ರಧಾನಿ ಮೋದಿಯವರ ರೋಡ್ಶೋ ನಿಮಿತ್ತ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ರಸ್ತೆಗಳು ಮತ್ತು ಮೆಟ್ರೋ ರೈಲು ಸೇವೆಗಳನ್ನು ಬಂದ್ ಮಾಡಲಾಗಿತ್ತು ಎಂದು ಅವರು ಹೇಳಿದರು.
"ಒಬ್ಬ ವ್ಯಕ್ತಿಯ ಪ್ರಚಾರಕ್ಕಾಗಿ ರಸ್ತೆಗಳನ್ನು ಮುಚ್ಚಿ ಜನರಿಗೆ ಅನಾನುಕೂಲತೆ ಉಂಟುಮಾಡುವ ಇಂತಹ ಘಟನೆ ಎಂದಿಗೂ ನಡೆದಿಲ್ಲ. ಹೋರ್ಡಿಂಗ್ ಕುಸಿತು 16 ಜನ ಸಾವನ್ನಪ್ಪಿದ ಸ್ಥಳದಲ್ಲೇ ರೋಡ್ಶೋ ನಡೆಸಿರುವುದು ಅಮಾನವೀಯವಾಗಿದೆ" ಎಂದು ಸೇನಾ(ಯುಬಿಟಿ) ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಾಟ್ಕೋಪರ್ನ ಛೇಡಾ ನಗರ ಪ್ರದೇಶದಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ 120 x 120 ಅಡಿಗಳ ಬೃಹತ್ ಹೋರ್ಡಿಂಗ್ ಕುಸಿದು 16 ಜನರು ಸಾವನ್ನಪ್ಪಿದ್ದರು ಮತ್ತು 75 ಮಂದಿ ಗಾಯಗೊಂಡಿದ್ದರು.
ಪ್ರಧಾನಿ ಮೋದಿ ಬುಧವಾರ ಸಂಜೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಅಭ್ಯರ್ಥಿಗಳ ಪರವಾಗಿ ಘಾಟ್ಕೋಪರ್ನಲ್ಲಿ ಮೆಗಾ ರೋಡ್ಶೋ ನಡೆಸಿದರು.
Advertisement