
ನವದೆಹಲಿ: ಖಲಿಸ್ತಾನಿ ಪರ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಮರಣ ಪ್ರಮಾಣ ಪತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮನವಿಯನ್ನು ಕೆನಡಾ ನಿರಂತರವಾಗಿ ನಿರಾಕರಿಸುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ನಿಜ್ಜರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯಾಲಯ ನವೀಕರಿಸುವ ಕಾನೂನು ಅಗತ್ಯವನ್ನು ಒದಗಿಸಲು NIAಗೆ ಮರಣ ಪ್ರಮಾಣ ಪತ್ರದ ಅಗತ್ಯವಿದೆ ಎಂದು ಕೆನಡಾದ ಅಧಿಕಾರಿಗಳಿಗೆ ತಿಳಿಸಿದ್ದರೂ, ಮನವಿಗೆ ಬೇರೆ ನಿರ್ದಿಷ್ಟ ಕಾರಣ ಒದಗಿಸುವಂತೆ ಒತ್ತಾಯಿಸುವುದನ್ನು ಮುಂದುವರೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ ಸರ್ರೆಯ ಗುರುದ್ವಾರದ ಹೊರಗೆ ಗುಂಡೇಟಿನಿಂದ ಹತ್ಯೆಯಾಗಿರುವ ವಿಷಯವನ್ನು ಘೋಷಿಸುವಾಗ ಕೆನಡಾ ಸರ್ಕಾರ ನಿಜ್ಜರ್ ಸಾವನ್ನು ದೃಢಪಡಿಸಿತ್ತು.
ಕೆನಡಾದ ಪೌರತ್ವ ಹೊಂದಿದ್ದ ನಿಜ್ಜರ್ ಅವರನ್ನು 2020 ರಲ್ಲಿ ಕೇಂದ್ರ ಗೃಹ ಸಚಿವಾಲಯ (MHA) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ 'ಗೊತ್ತುಪಡಿಸಿದ ಭಯೋತ್ಪಾದಕ" ಎಂದು ಘೋಷಿಸಿತ್ತು. ಪ್ರಧಾನ ಮಂತ್ರಿ ಕಳೆದ ವರ್ಷ ಕೆನಡಾದ ಸಂಸತ್ತಿನಲ್ಲಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ "ವಿಶ್ವಾಸಾರ್ಹ ಮಾಹಿತಿ" ಇದೆ ಎಂದು ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿತ್ತು.
ಭಾರತ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಅವುಗಳನ್ನು ಅಸಂಬದ್ಧ ಮತ್ತು ಪ್ರೇರಿತ ಎಂದು ಕರೆದಿದೆ . ಕೆನಡಾ ತಮ್ಮ ದೇಶದಲ್ಲಿ ಉಗ್ರಗಾಮಿ ಮತ್ತು ಭಾರತ ವಿರೋಧಿ ಅಂಶಗಳಿಗೆ ಜಾಗ ನೀಡುತ್ತಿದೆ ಎಂದು ಆರೋಪಿಸಿದೆ. ತದನಂತರ ಕೆನಡಾದ ನೆಲದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತಕ್ಕೆ ಗಟ್ಟಿಯಾದ ಪುರಾವೆ ಒದಗಿಸಿಲ್ಲ ಆದರೆ ಕೇವಲ ಗುಪ್ತಚರ ಮಾಹಿತಿ ಒದಗಿಸಿರುವುದಾಗಿ ಕೆನಡಾದ ಪ್ರಧಾನಿ ಟ್ರುಡೊ ಒಪ್ಪಿಕೊಂಡಿದ್ದರು.
ಈ ಮಧ್ಯೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಸ್ತುತ ಅಮೆರಿಕನ್ ಮತ್ತು ಕೆನಡಾದ ಪೌರತ್ವವನ್ನು ಹೊಂದಿರುವ ಗೊತ್ತುಪಡಿಸಿದ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಒಳಗೊಂಡ ಆರು ಪ್ರಕರಣಗಳ ತನಿಖೆ ನಡೆಸುತ್ತಿದೆ. ಪನ್ನು ವಿರುದ್ಧದ ತನಿಖೆಯಲ್ಲಿ ಚಂಡೀಗಢದಲ್ಲಿ ಪನ್ನು ಒಡೆತನದ ಮೂರು ಆಸ್ತಿಗಳನ್ನು ಜಪ್ತಿ ಮಾಡಿದೆ. ಅಲ್ಲದೇ, ಆತನೊಂದಿಗೆ ಸಂಬಂಧ ಹೊಂದಿರುವ ಅಮೃತಸರದ ಹಲವಾರು ಜಮೀನುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
Advertisement