
ನವೆದಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ ಪಕ್ಷ ಈಗ "ಕಾಪಿ- ಪೇಸ್ಟ್''ಪಕ್ಷವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ನಾಯಕರು ನೀಡುತ್ತಿರುವ ಹೇಳಿಕೆಗಳು "ಅತ್ಯಂತ ಆಕ್ಷೇಪಾರ್ಹ" ಮತ್ತು ಹಿಂಸಾತ್ಮಕವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಖರ್ಗೆ ಅವರಿಗೆ ಜೆ. ಪಿ. ನಡ್ಡಾ ಬರೆದಿರುವ ಪತ್ರದಲ್ಲಿ ಈ ರೀತಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಳ್ಳುವ ಖರ್ಗೆ ಅವರ ಪ್ರಯತ್ನವನ್ನು ನಡ್ಡಾ ಟೀಕಿಸಿದ್ದಾರೆ. ಇದು " ರಾಜಕೀಯವಾಗಿ ವಿಫಲವಾಗಿರುವ ರಾಹುಲ್ ಗಾಂಧಿ ಅವರಿಗೆ ಹೊಳಪು ನೀಡುವ ಪ್ರಯತ್ನ ಎಂದು ಕರೆದಿದ್ದಾರೆ. ಪ್ರಧಾನ ಮಂತ್ರಿ ಮತ್ತು ಹಿಂದುಳಿದ ಸಮುದಾಯವನ್ನು ಅಪಮಾನಿಸಿರುವ ರಾಹುಲ್ ಚರಿತ್ರೆಯನ್ನು ಪತ್ರದಲ್ಲಿ ನೆನಪಿಸಿದ್ದಾರೆ.
ಪ್ರಧಾನಿಯನ್ನು "ಕಳ್ಳ ಮತ್ತಿತರ ಅನುಚಿತ ಭಾಷೆಗಳನ್ನು ಬಳಸುವುದು ಸೇರಿದಂತೆ ಗಾಂಧಿಯವರ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿರುವ ಜೆಪಿ ನಡ್ಡಾ, ಯಾವ ಒತ್ತಡದಿಂದ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದು ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ. ಮೋದಿಯನ್ನು ಸಾವಿನ ವ್ಯಾಪಾರಿ" ಎಂದು ಕರೆದಿದ್ದ ಸೋನಿಯಾ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಮಾಡಿದ ಹಿಂದಿನ ಟೀಕೆಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ವೈಭವೀಕರಿಸುತ್ತಿದೆ ಎಂದು ಟೀಕಿಸಿದ ನಡ್ಡಾ, ಕಾಂಗ್ರೆಸ್ ರಾಜಕೀಯ ಶುದ್ಧತೆಯನ್ನು ಏಕೆ ಮರೆತಿದೆ?" ಅದು ರಾಜಕೀಯ ಘನತೆ ಎತ್ತಿ ಹಿಡಿಯುವುದಾಗಿ ಹೇಳಿಕೊಂಡು ರಾಜಕೀಯ ಗುಣಮಟ್ಟವನ್ನು ಕಡೆಗಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಈಗ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ "ಕಾಪಿ- ಪೇಸ್ಟ್ ಪಕ್ಷವಾಗಿದೆ. ಅವರ ಒತ್ತಡದಿಂದ ಪಕ್ಷ ಇದೀಗ ದುಷ್ಟ ಮಾರ್ಗಗಳನ್ನು ಅಳವಡಿಸಿಕೊಂಡಿದೆ. ಕಳೆದ ಒಂದು ದಶಕದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರನ್ನು 110 ಬಾರಿ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಜೆ ಪಿ ನಡ್ಡಾ, ಕಾಂಗ್ರೆಸ್ ನಾಯಕರು ಬಳಸಿದ್ದಾರೆ ಎನ್ನಲಾದ ಅವಹೇಳನಕಾರಿ ಪದಗಳನ್ನು ಪಟ್ಟಿ ಮಾಡಿದ್ದಾರೆ.
Advertisement