
ರಾಮೇಶ್ವರಂ: ಪಂಬನ್ ಸೇತುವೆ ಉದ್ಘಾಟನೆ ಮಾಡಲು ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹಿಂದಿ ಹೇರಿಕೆ ವಿಷಯವಾಗಿ ಡಿಎಂಕೆ, ಸಿಎಂ ಎಂಎಕೆ ಸ್ಟ್ಯಾಲಿನ್ ಗೆ ಭರ್ಜರಿ ಟಾಂಗ್ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪ ಮಾಡಿತ್ತು. ಈ ಆರೋಪಗಳಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನಿಂದ ಹಲವು ರಾಜಕಾರಣಿಗಳು ತಮಗೆ ಪತ್ರ ಬರೆಯುತ್ತಾರೆ. ಆ ಪತ್ರಗಳು ಸಂಪೂರ್ಣ ಇಂಗ್ಲೀಷ್ ನಲ್ಲಿಯೇ ಇರುತ್ತದೆ. ಕನಿಷ್ಠ ಪಕ್ಷ ಪತ್ರದ ಕೆಳಗೆ ಸಹಿಯನ್ನಾದರೂ ತಮಿಳಿನಲ್ಲಿ ಮಾಡುವುದಿಲ್ಲ. ಸಹಿಯನ್ನಾದರೂ ಇನ್ನು ಮುಂದೆ ತಮಿಳಿನಲ್ಲಿ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ‘ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಿ’ ಎಂದು ಸ್ಟಾಲಿನ್ ಸರ್ಕಾರಕ್ಕೆ ಮೋದಿ ಸವಾಲು ಹಾಕಿದ್ದಾರೆ.
ರಾಮನವಮಿಯ ಸಂದರ್ಭದಲ್ಲಿ ತಮಿಳುನಾಡಿನ ಒಟ್ಟು 8,300 ಕೋಟಿ ರು.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಪಾಂಬನ್ ಸೇತುವೆಯನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಿದ ನಂತರ ಮೋದಿ ಈ ಹೇಳಿಕೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮೋದಿ ತಮಿಳು ಭಾಷೆ ಬಗ್ಗೆ ಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ‘ತಮಿಳು ಭಾಷೆ, ಪರಂಪರೆಯನ್ನು ಜಗತ್ತಿನ ಮೂಲೆ ಮೂಲೆಗಳಿಗೆ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಮೋದಿ ತಿಳಿಸಿದ್ದಾರೆ.
ಇದೇ ವೇಳೆ ಡಿಎಂಕೆ ಜನಪ್ರತಿನಿಧಿಗಳನ್ನು ಅವರ ಹೆಸರೆತ್ತದೇ ತರಾಟೆಗೆ ತೆಗೆದುಕೊಂಡ ಮೋದಿ, ‘ನನಗೆ ತಮಿಳುನಾಡಿನ ನಾಯಕರ ಪತ್ರಗಳು ಬರುತ್ತವೆ. ಆದರೆ ಅವುಗಳಲ್ಲಿನ ಸಹಿ ತಮಿಳಿನಲ್ಲಿ ಇರುವುದಿಲ್ಲ. ಕನಿಷ್ಠ ಪಕ್ಷ ನಿಮ್ಮ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ’ ಎಂದು ಟೀಕಾ ಪ್ರಹಾರ ಮಾಡಿದ್ದಾರೆ.
ಸಾಮಾನ್ಯವಾಗಿ ಹಿಂದಿಯಲ್ಲಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದಿ ಹೇರಿಕೆ ವಿವಾದದ ನಡುವೆ ರಾಮೇಶ್ವರದಲ್ಲಿ ಭಾನುವಾರ ಹಿಂದಿ ಜತೆಗೆ ಇಂಗ್ಲಿಷ್ನಲ್ಲೂ ಭಾಷಣ ಮಾಡಿ ಗಮನ ಸೆಳೆದರು. ಅವರ ಭಾಷಣವನ್ನು ತಮಿಳಿಗೆ ತರ್ಜುಮೆಯನ್ನೂ ಮಾಡಲಾಯಿತು.
ಇತ್ತೀಚೆಗೆ ತಮಿಳುನಾಡಿನ ಡಿಎಂಕೆ ಸರ್ಕಾರ. ‘ಕೇಂದ್ರ ಸರ್ಕಾರ ಶಿಕ್ಷಣ ಹಾಗೂ ಆಡಳಿತದಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ’ ಎಂದು ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
Advertisement