
ಅಹಮದಾಬಾದ್: ಪಕ್ಷದ ಸಂಘಟನೆಗೆ ಯಾರು ಕೆಲಸ ಮಾಡುವುದಿಲ್ಲವೋ ಅವರು ವಿಶ್ರಾಂತಿ ಪಡೆಯಲಿ. ಹಾಗೆಯೇ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲವೋ ಅಂಥವರು ನಿವೃತ್ತಿ ಹೊಂದಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಹಮದಾಬಾದ್ನಲ್ಲಿ ಬುಧವಾರ ಪೂರ್ಣಗೊಂಡ ಎರಡು ದಿನಗಳ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆ ಹಾಗೂ ಸಂಘಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಪಾತ್ರ ದೊಡ್ಡದಿದೆ. ಹಾಗಾಗಿ, ಎಐಸಿಸಿ ಮಾರ್ಗಸೂಚಿಯಂತೆ ಜಿಲ್ಲಾಧ್ಯಕ್ಷರ ನೇಮಕವನ್ನು ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಹೇಳಿದರು.
'ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಒಂದು ವರ್ಷದೊಳಗೆ ಅವರು ಜನರನ್ನು ಸೇರಿಸಿಕೊಂಡು ಬೂತ್ ಸಮಿತಿ, ಮಂಡಲ್ ಸಮಿತಿ, ಬ್ಲಾಕ್ ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ರಚಿಸಿ ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಭವಿಷ್ಯದಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ಪಾಲಿಗೆ ರಾಷ್ಟ್ರೀಯತೆ ಎಂದರೆ ಜನರನ್ನು ಒಗ್ಗೂಡಿಸುವುದಾಗಿದೆ. ಆದರೆ ಬಿಜೆಪಿ - ಆರೆಸ್ಸೆಸ್ನದ್ದು ಹುಸಿ ರಾಷ್ಟ್ರೀಯತೆ ಆಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಕೇಂದ್ರ ಸರಕಾರವು ಸಂವಿಧಾನಿಕ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಸಂವಿಧಾನದ ಆಶಯ ಬುಡಮೇಲು ಮಾಡುವ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೇಂದ್ರದ ನಡೆಯ ವಿರುದ್ಧ ಕಾಂಗ್ರೆಸ್ ನ್ಯಾಯಪಥದಲ್ಲಿ ಹೋರಾಟ ನಡೆಸಲಿದೆ,'' ಎಂದು ಕಾರ್ಯಕಾರಿಣಿ ನಿರ್ಣಯ ಕೈಗೊಂಡಿದೆ.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇವರಲ್ಲಿ ಬಹುತೇಕರು ಭಯದಿಂದ ಬದುಕುವಂತೆ ಮಾಡಲಾಗುತ್ತಿದೆ ಎಂಬುದು ಕಟು ಸತ್ಯ. ಇದು ಅಪಮಾನಕರ ಮಾತ್ರವಲ್ಲ, ಸಂವಿಧಾನದ ವಿರುದ್ದದ ಅಪರಾಧ ಎಂದೂ ನಿರ್ಣಯ ಹೇಳಿದೆ.
Advertisement