
ಚಂಡೀಗಢ: ದೆಹಲಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಧಿಕೃತ ನಿವಾಸವಾದ ಕಪುರ್ತಲಾ ಹೌಸ್ನಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳ ಮದುವೆ ನಡೆಸಿದ್ದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ಬಿಜೆಪಿ ಅಧ್ಯಕ್ಷ ಸುನಿಲ್ ಜಾಖರ್ ಅವರು ಸಿಎಂ ಅವರ ಅಧಿಕೃತ ನಿವಾಸ ಈಗ 'ಪ್ರತಿಷ್ಠಿತರ ವಿವಾಹ ಅರಮನೆ'ಯಾಗಿದೆ ಎಂದು ಟೀಕಿಸಿದ್ದಾರೆ.
ಇನ್ನು ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪರ್ತಪ್ ಸಿಂಗ್ ಬಜ್ವಾ ಅವರು, "ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ನುಡಿಸುತ್ತಿದ್ದರು" ಸಿಎಂ ಮಾನ್ ಅವರನ್ನು ಟೀಕಿಸಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಅವರು ನಿನ್ನೆ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಮ್ಮ ಕ್ಲಾಸ್ ಮೇಟ್ ಸಂಭವ್ ಜೈನ್ ಅವರೊಂದಿಗೆ ದೆಹಲಿಯ ಪಂಜಾಬ್ ಸಿಎಂ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು.
ದೆಹಲಿಯ ಪಂಜಾಬ್ ಮುಖ್ಯಮಂತ್ರಿಯ ಅಧಿಕೃತ ನಿವಾಸವಾದ ಕಪುರ್ತಲಾ ಹೌಸ್ನಲ್ಲಿ ನಡೆದ ಎರಡನೇ ಹೈ-ಪ್ರೊಫೈಲ್ ಖಾಸಗಿ ಕಾರ್ಯಕ್ರಮ ಇದಾಗಿದೆ. ಈ ಹಿಂದೆ 2023 ರ ಮೇ ತಿಂಗಳ ಆರಂಭದಲ್ಲಿ, ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಅವರ ನಿಶ್ಚಿತಾರ್ಥ ಸಮಾರಂಭ ಇಲ್ಲಿಯೇ ನಡೆದಿತ್ತು.
ಕೇಜ್ರಿವಾಲ್ ಪುತ್ರಿಯ ಮದುವೆಗೆ ಸುಮಾರು 150 ಆಯ್ದ ಆಮಂತ್ರಣ ಪತ್ರಿಕೆಗಳನ್ನು ನೀಡಲಾಗಿದ್ದು, ಇದರಲ್ಲಿ ಸಂಪೂರ್ಣ ಸಸ್ಯಾಹಾರಿ ಮೆನು ಮತ್ತು ಪಂಜಾಬಿ ಗಾಯಕಿ ಮಿಕಾ ಅವರ ಪ್ರದರ್ಶನವಿತ್ತು ಎಂದು ತಿಳಿದುಬಂದಿದೆ.
Advertisement