ಔರಂಗಜೇಬ್ ಒಬ್ಬ ಧರ್ಮಾಂಧ, ಕ್ರೂರಿ; ಬಾಬರ್ ನ್ನು ವೈಭವೀಕರಿಸುವುದರಿಂದ ದೇಶದ ಮುಸ್ಲಿಮರಿಗೆ ಅವಮಾನ: Rajnath Singh
ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರೀಯ ವೀರರು, ಮೊಘಲ್ ಚಕ್ರವರ್ತಿ ಔರಂಗಜೇಬನಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮೇವಾರ್ ದೊರೆ ಮಹಾರಾಣಾ ಪ್ರತಾಪ್ ಅವರ ಆಳೆತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ಔರಂಗಜೇಬ್ ಅಥವಾ ಬಾಬರ್ ಅವರನ್ನು ವೈಭವೀಕರಿಸುವವರು ದೇಶದ ಮುಸ್ಲಿಮರನ್ನು ಅವಮಾನಿಸುತ್ತಾರೆ ಎಂದು ಹೇಳಿದ್ದಾರೆ.
"ಮಹಾರಾಣಾ ಪ್ರತಾಪ್ ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿದ್ದರು... ಛತ್ರಪತಿ ಶಿವಾಜಿ ಮಹಾರಾಜರು ವಿಶೇಷವಾಗಿ ಗೆರಿಲ್ಲಾ ಯುದ್ಧ ತಂತ್ರಗಳಿಗಾಗಿ ಮಹಾರಾಣಾ ಪ್ರತಾಪ್ ಅವರಿಂದ ಸ್ಫೂರ್ತಿ ಪಡೆದರು" ಎಂದು ಸಿಂಗ್ ಹೇಳಿದ್ದಾರೆ.
ಎಡಪಂಥೀಯ ಒಲವು ಹೊಂದಿರುವ ಸ್ವಾತಂತ್ರ್ಯಾನಂತರದ ಇತಿಹಾಸಕಾರರು ರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಿಗೆ ಸರಿಯಾದ ಮನ್ನಣೆ ನೀಡಲಿಲ್ಲ, ಆದರೆ ಔರಂಗಜೇಬನನ್ನು ಶ್ಲಾಘಿಸಿದರು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
"ಔರಂಗಜೇಬ್ ಒಬ್ಬ ವೀರ ಎಂದು ಭಾವಿಸುವವರು ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಓದಬೇಕು, ಅವರು ಮೊಘಲ್ ಔರಂಗಜೇಬ್ ನನ್ನು ಒಬ್ಬ ಧರ್ಮಾಂಧ, ಕ್ರೂರ ಆಡಳಿತಗಾರ ಎಂದು ಬರೆದಿದ್ದಾರೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
"ದಾರ ಶಿಕೋ ಉಪನಿಷತ್ತುಗಳನ್ನು ಅನುವಾದಿಸಿದರು, ಆದರೆ ಆತನ ಸಹೋದರನಾಗಿದ್ದರೂ ಔರಂಗಜೇಬ್ ದಾರ ಶಿಕೋನನ್ನು ಕೊಂದರು. ದಾರಾ ಶಿಕೋ ಎಲ್ಲಾ ಧರ್ಮಗಳನ್ನು ಗೌರವಿಸಿದ್ದರು" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಔರಂಗಾಬಾದ್ ನ್ನು ಛತ್ರಪತಿ ಸಂಭಾಜಿನಗರ ಮತ್ತು ದೆಹಲಿಯ ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡುವುದರಲ್ಲಿ ತಪ್ಪೇನಿದೆ ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ.
"ಬಾಬರ್, ತೈಮೂರ್, ಔರಂಗಜೇಬ್, ಘೋರಿ ಮತ್ತು ಘಜ್ನವಿ ಅವರನ್ನು ವೈಭವೀಕರಿಸುವುದರಿಂದ ಯಾವುದೇ ಮುಸ್ಲಿಂ ಮತಗಳು ಸಿಗುವುದಿಲ್ಲ. ಈ ಜನರನ್ನು ಹೊಗಳುವವರು ಭಾರತೀಯ ಮುಸ್ಲಿಮರನ್ನು ಅವಮಾನಿಸುತ್ತಾರೆ" ಎಂದು ಅವರು ಹೇಳಿದರು.
ಇತ್ತೀಚೆಗೆ ಕೆಲವು ಬಲಪಂಥೀಯ ನಾಯಕರು ಛತ್ರಪತಿ ಸಂಭಾಜಿನಗರದ ಕುಲ್ದಾಬಾದ್ನಲ್ಲಿರುವ ಔರಂಗಜೇಬ್ (1618 -1707) ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದಾಗ ಮಹಾರಾಷ್ಟ್ರದಲ್ಲಿ ಗಲಭೆಗಳಾಗಿತ್ತು.