
ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ವಿರುದ್ಧ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರು ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಆಡಳಿತ ಪಕ್ಷ ಅಂತರ ಕಾಯ್ದುಕೊಂಡಿದೆ. ಬಿಜೆಪಿ ಈ ನಡೆ ಡ್ಯಾಮೇಜ್ ಕಂಟ್ರೋಲ್ ಎಂದು ಕಾಂಗ್ರೆಸ್ ಭಾನುವಾರ ಟೀಕಿಸಿದೆ.
ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಮುಚ್ಚಬೇಕು. ದೇಶದ "ಅಂತರ್ಯುದ್ಧಗಳಿಗೆ" ಸಿಜೆಐ ಸಂಜೀವ್ ಖನ್ನಾ ಅವರ ಹೊಣೆ ಎಂದು ದು ನ್ಯಾಯಾಂಗ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇನ್ನು ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ಶರ್ಮಾ ಕೂಡ ಸುಪ್ರೀಂ ಕೋರ್ಟ್ ಅನ್ನು ಟೀಕಿಸಿದ್ದರು. ಸಂಸತ್ತು ಅಥವಾ ರಾಷ್ಟ್ರಪತಿಗೆ ಯಾರೂ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ದುಬೆ ಮತ್ತು ಶರ್ಮಾ ಅವರ ಸುಪ್ರೀಂ ಕೋರ್ಟ್ ಟೀಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಎಂದು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
"ನ್ಯಾಯಾಂಗ ಮತ್ತು ಮುಖ್ಯ ನ್ಯಾಯಮೂರ್ತಿಗಳ ಕುರಿತು ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರ ಕಾಮೆಂಟ್ಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇವು ಅವರ ವೈಯಕ್ತಿಕ ಹೇಳಿಕೆಯಾಗಿವೆ. ಆದರೆ ಬಿಜೆಪಿ ಅವುಗಳನ್ನು ಒಪ್ಪುವುದಿಲ್ಲ ಅಥವಾ ಅಂತಹ ಹೇಳಿಕೆಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಬಿಜೆಪಿ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ" ಎಂದು ಅವರು ನಡ್ಡಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಡ್ಡಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬಿಜೆಪಿಯ ಪದತ್ಯಾಗ ಮಾಡಲಿರುವ ಅಧ್ಯಕ್ಷರು ನೀಡಿರುವ ಸ್ಪಷ್ಟನೆಯು ಡ್ಯಾಮೇಜ್ ಕಂಟ್ರೋಲ್ ಅಲ್ಲದೆ ಮತ್ತೇನು ಅಲ್ಲ" ಎಂದು ತಿರುಗೇಟು ನೀಡಿದ್ದಾರೆ.
"ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಪಕ್ಷದ ಇಬ್ಬರು ಸಂಸದರು ನೀಡಿರುವ ದೌರ್ಜನ್ಯಕಾರಿ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿರುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
"ದ್ವೇಷ ಭಾಷಣದ ವಿಷಯಕ್ಕೆ ಬಂದಾಗ, ಈ ಇಬ್ಬರು ಸಂಸದರು ಪದೇ ಪದೇ ತಪ್ಪುಗಳನ್ನು ಪುನರಾವರ್ತಿಸುತ್ತಿದ್ದು, ಇವರಿಬ್ಬರನ್ನು ಸಮುದಾಯಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ದಾಳಿ ನಡೆಸಲು ಜಿ2 ಬಳಸಿಕೊಂಡಿದೆ. ಬಿಜೆಪಿಯ ಪದತ್ಯಾಗ ಮಾಡಲಿರುವ ಅಧ್ಯಕ್ಷರು ನೀಡಿರುವ ಸ್ಪಷ್ಟನೆಯು ಡ್ಯಾಮೇಜ್ ಕಂಟ್ರೋಲ್ ಅಲ್ಲದೆ ಮತ್ತೇನಲ್ಲ" ಎಂದು ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಒಂದು ವೇಳೆ, ಭಾರತದ ಸಂವಿಧಾನದ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ಮೌನವು ಅಂತಹ ದಾಳಿಕೋರರಿಗೆ ನೀಡುತ್ತಿರುವ ಚಾಣಾಕ್ಷ ಬೆಂಬಲವಲ್ಲದಿದ್ದರೆ, ಈ ಇಬ್ಬರು ಸಂಸದರ ವಿರುದ್ಧ ಯಾವುದೇ ಕ್ರಮವನ್ನು ಏಕೆ ಜರುಗಿಸಿಲ್ಲ? ಈ ಇಬ್ಬರು ಸಂಸದರಿಗೆ ನಡ್ಡಾ ಅವರೇನಾದರೂ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆಯೆ?" ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
Advertisement