
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಾಳಿ ನಡೆಸಿ ತೀವ್ರ ಕೋಲಾಹಲ ಸೃಷ್ಟಿಸಿದ ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಭಾನುವಾರ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ವೈ ಖುರೇಶಿ ಅವರನ್ನು ಟೀಕಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು "ಮುಸ್ಲಿಂ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರದ ದುಷ್ಟ ಯೋಜನೆ" ಎಂದು ಖುರೇಶಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಮಾಜಿ ಸಿಇಸಿ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ದುಬೆ ಅವರು, ಖುರೇಶಿ ಅವರು ಚುನಾವಣಾ ಆಯುಕ್ತರಾಗಿರಲಿಲ್ಲ. ಮುಸ್ಲಿಂ ಆಯುಕ್ತರಾಗಿದ್ದರು ಎಂದು ಹೇಳಿದ್ದಾರೆ.
"ವಕ್ಫ್ ಕಾಯ್ದೆ ನಿಸ್ಸಂದೇಹವಾಗಿ ಮುಸ್ಲಿಂ ಭೂಮಿಯನ್ನು ಕಬಳಿಸಲು ಸರ್ಕಾರದ ಒಂದು ದುಷ್ಟ ಯೋಜನೆಯಾಗಿದೆ. ಸುಪ್ರೀಂ ಕೋರ್ಟ್ ಅದನ್ನು ಬಹಿರಂಗವಾಗಿ ಹೇಳುತ್ತದೆ ಎಂದು ನನಗೆ ವಿಶ್ವಾಸವಿದೆ. ದುರುದ್ದೇಶಪೂರಿತ ಪ್ರಚಾರ ಯಂತ್ರ ತನ್ನ ಕೆಲಸವನ್ನು ಚೆನ್ನಾಗಿ ಮಾಡಿದೆ" ಎಂದು ಏಪ್ರಿಲ್ 17 ರಂದು ಖುರೇಶಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದ ದುಬೆ, ಭಾರತದಲ್ಲಿ "ಧಾರ್ಮಿಕ ಯುದ್ಧಗಳಿಗೆ" ಅವರೇ ಹೊಣೆ ಎಂದು ಆರೋಪಿಸಿದ್ದರು. ದುಬೆ ಅವರ ವಿವಾದಾತ್ಮಕ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದೆ.
Advertisement