ಪಹಲ್ಗಾಮ್ ಉಗ್ರರ ದಾಳಿಗೆ ಖಂಡನೆ: ನಾಳೆ ಜಮ್ಮುವಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, ಬಿಗಿ ಭದ್ರತೆ
ಜಮ್ಮು: ಪಹಲ್ಗಾಮ್ ನಲ್ಲಿನ ಭೀಕರ ಉಗ್ರರ ದಾಳಿಯನ್ನು ಖಂಡಿಸಿ ಜಮ್ಮುವಿನಲ್ಲಿ ನಾಳೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಪುಲ್ವಾಮಾ ಘಟನೆ ನಂತರ ಕಣಿವೆ ಪ್ರದೇಶದಲ್ಲಿ ನಡೆದ ಅತಿದೊಡ್ಡ ಮಾರಕ ಉಗ್ರರ ದಾಳಿಯಲ್ಲಿ 27ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಮೃತರಲ್ಲಿ ಇಬ್ಬರು ವಿದೇಶಿಗರು ಸೇರಿದ್ದಾರೆ.
ಈ ದುಷ್ಕೃತ್ಯವನ್ನು ವಿರೋಧಿಸಿ ಜಮ್ಮು-ಕಾಶ್ಮೀರ ಕಾಂಗ್ರೆಸ್ ಘಟಕ ಸೇರಿದಂತೆ ಅನೇಕ ಬಲ ಪಂಥೀಯ ಸಂಘಟನೆಗಳು ಜಮ್ಮು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಜಮ್ಮು ವಿಭಾಗೀಯ ಕಮಿಷನರ್ ರಮೇಶ್ ಕುಮಾರ್ ಮತ್ತು ಐಜಿಪಿ ಭೀಮ್ ಸೇನ್ ಟುಟಿ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಹೆಚ್ಚುವರಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉಗ್ರರ ದಾಳಿ ವಿರೋಧಿ ಪ್ರತಿಭಟನೆ ನಡೆಸಲು ಬುಧವಾರ ಬೆಳಗ್ಗೆ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸುವಂತೆ ಕಾಂಗ್ರೆಸ್ ಪಕ್ಷ, ಜಮ್ಮು ನಗರ ಮತ್ತು ಗ್ರಾಮೀಣ ಬ್ಲಾಕ್ ನ ನಾಯಕರು, ಕಾರ್ಯಕರ್ತರಿಗೆ ಸೂಚಿಸಿದೆ. ಶಿವಸೇನಾ (UBT) ರಾಷ್ಟ್ರೀಯ ಬಜರಂಗ ದಳ, ದಿ ದೋಗ್ರಾ ಫ್ರಾಂಟ್ ಅಲ್ಲದೇ, ಚೆಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ವಕೀಲರು ಮತ್ತು ವಿವಿಧ ಮಾರುಕಟ್ಟೆಗಳ ಅಸೋಸಿಯೇಷನ್ ಗೆ ಪ್ರತಿಭಟನೆಗೆ ಕರೆ ನೀಡಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ