
ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಆಹ್ವಾನಿಸಿದ ನಂತರ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತಾದ ಸರ್ವಪಕ್ಷ ಸಭೆಯಲ್ಲಿ AIMIM ಮುಖ್ಯಸ್ಥ ಅಸ್ಸಾದುದ್ದೀನ್ ಓವೈಸಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಅಮಿತ್ ಶಾ ಸಭೆಗೆ ಹಾಜರಾಗಲು ತಮ್ಮನ್ನು ಆಹ್ವಾನಿಸಿದ್ದಾರೆ ಮತ್ತು ಅಲ್ಲಿಗೆ ಹಾಜರಾಗಲು ತಾವು ಮೊದಲು ಟಿಕೆಟ್ ಕಾಯ್ದಿರಿಸುವುದಾಗಿ ಹೇಳಿದ್ದಾರೆ.
"ಸರ್ವಪಕ್ಷ ಸಭೆಯನ್ನು ಕರೆಯಲು ಕಾರಣ ರಾಷ್ಟ್ರೀಯ ಮಹತ್ವದ್ದಾಗಿದೆ. ಗೃಹ ಸಚಿವರು ನನಗೆ ಕರೆ ಮಾಡಿ ನಾನು ಎಲ್ಲಿದ್ದೇನೆ ಎಂದು ಕೇಳಿದರು. ಅವರು ನನಗೆ ಬರಲು ಹೇಳಿದ್ದಾರೆ ನಾನು ಮೊದಲು ಟಿಕೆಟ್ ಕಾಯ್ದಿರಿಸಿ (ದೆಹಲಿಯಲ್ಲಿ) ಸರ್ವಪಕ್ಷ ಸಭೆಗೆ ತಲುಪುತ್ತೇನೆ" ಎಂದು ಓವೈಸಿ ಹೇಳಿದ್ದಾರೆ.
ಆರಂಭದಲ್ಲಿ ಸರ್ವಪಕ್ಷ ಸಭೆಗೆ 5-10 ಸಂಸದರಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸುತ್ತಿದ್ದೇವೆ ಆದ್ದರಿಂದ ನಿಮ್ಮನ್ನು ಆಹ್ವಾನಿಸಿಲ್ಲ ಎಂದು ಕಿರಣ್ ರಿಜಿಜು ಅಸಾದುದ್ದೀನ್ ಓವೈಸಿಗೆ ಹೇಳಿದ್ದರು. ಈ ನಡುವೆ ತಮ್ಮನ್ನು ಯಾಕೆ ಆಹ್ವಾನಿಸಿಲ್ಲ ಎಂಬ ಓವೈಸಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ರಿಜಿಜು, ನಿಮ್ಮ ಧ್ವನಿ ಜೋರಾಗಿಯೇ ಇದೆ ಹಾಗೆಯೇ ಕೇಳುತ್ತದೆ ಬಿಡಿ ಎಂದು ತಮಾಷೆ ಮಾಡಿದ್ದರು. ಅಷ್ಟೇ ಅಲ್ಲದೇ ಎಲ್ಲರಿಗೂ ಆಹ್ವಾನ ನೀಡಿದರೆ ಸಭೆ "ತುಂಬಾ ಸಮಯ ತೆಗೆದುಕೊಳ್ಳುತ್ತದೆ" ಎಂದು ರಿಜಿಜು ವಾದಿಸಿದ್ದಾರೆ ಎಂದು ಓವೈಸಿ ಹೇಳಿದರು.
"ಇದು ಬಿಜೆಪಿ ಅಥವಾ ಇನ್ನೊಂದು ಪಕ್ಷದ ಆಂತರಿಕ ಸಭೆಯಲ್ಲ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಬಲವಾದ ಮತ್ತು ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ನಡೆಸಲಾದ ಸರ್ವಪಕ್ಷ ಸಭೆಯಾಗಿದೆ. ಎಲ್ಲಾ ಪಕ್ಷಗಳ ಕಳವಳಗಳನ್ನು ಆಲಿಸಲು ನರೇಂದ್ರ ಮೋದಿ ಹೆಚ್ಚುವರಿ ಒಂದು ಗಂಟೆ ಕಳೆಯಲು ಸಾಧ್ಯವಿಲ್ಲವೇ?" ಎಂದು ಓವೈಸಿ ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಎಲ್ಲಾ ಪಕ್ಷಗಳು ಹಾಜರಿರುವ ಅಗತ್ಯವನ್ನು ಓವೈಸಿ ಒತ್ತಿ ಹೇಳಿದರು ಮತ್ತು ಎಲ್ಲರಿಗೂ ಆಹ್ವಾನ ನೀಡಬೇಕೆಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು.
Advertisement