
ಕೋಲ್ಕತ್ತಾ: ಪಹಲ್ಗಾಮ್ ಉಗ್ರರ ದಾಳಿಗೆ ಗುಪ್ತಚರ ವೈಫಲ್ಯಯೇ ಕಾರಣ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಶಂಕರ್ ರಾಯ್ ಚೌಧರಿ ಶುಕ್ರವಾರ ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ದೇಶದ 18 ನೇ ಸೇನಾ ಮುಖ್ಯಸ್ಥ ರಾಯ್ ಚೌಧರಿ, ಉಗ್ರ ದಾಳಿಗೆ ಗುಪ್ತಚರ ವೈಫಲ್ಯವೇ ಪ್ರಮುಖ ಕಾರಣವಾಗಿದೆ. ಲೋಪದೋಷಗಳಿಗೆ ಯಾರಾದರೂ ಉತ್ತರಿಸಬೇಕು. ನಿರ್ಲಕ್ಷ್ಯಕ್ಕೆ ಖಂಡಿತವಾಗಿಯೂ ಯಾರಾದರೂ ಜವಾಬ್ದಾರರಾಗಿರುತ್ತಾರೆ ಮತ್ತು ಪರಿಣಾಮಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ISI (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಪಾತ್ರವಿದೆ. ಅನೇಕ ನುಸುಳುಕೋರರು ಹೇಗೆ ಪ್ರವೇಶಿಸಿದರು? ಇದನ್ನು ತನಿಖೆ ಮಾಡಬೇಕಾಗಿದೆ" ಎಂದು ಅವರು ಹೇಳಿದರು. ಲಷ್ಕರ್-ಎ-ತೊಯ್ಬಾ, ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಪಾಕಿಸ್ತಾನದ ಮೇಲೆ ಭಾರತ ಸರ್ಕಾರದ ರಾಜತಾಂತ್ರಿಕ ನಿರ್ಬಂಧಗಳು ಸಮರ್ಪಕ ಪ್ರತಿಕ್ರಿಯೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್ ಚೌಧರಿ, ತೆಗೆದುಕೊಂಡ ರಾಜತಾಂತ್ರಿಕ ಕ್ರಮಗಳು ಸಾಕಾಗುವುದಿಲ್ಲ. ಪ್ರತಿರೋಧದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಸಾಂಪ್ರದಾಯಿಕ ಕ್ರಮಗಳು ಸಾಕಾಗುವುದಿಲ್ಲ. ನಾವು ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಉಳಿಸಿಕೊಳ್ಳುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ರಾಯ್ಚೌಧರಿ ಹೇಳಿದರು.
ಪಾಕಿಸ್ತಾನದ ಮೇಲೆ ಯಾವಾಗಲೂ ನಮ್ಮ ಕಣ್ಮು ಮತ್ತು ಕಿವಿ ನೆಟ್ಟಿರಬೇಕು. ISI ಯಾವಾಗಲೂ ಸಕ್ರಿಯ ಪಾತ್ರ ವಹಿಸುತ್ತಿದೆ. ನಮ್ಮ ಗುಪ್ತಚರ ಸಂಸ್ಥೆ RAW ವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
Advertisement