
ತಿರುಪತಿ: ಶ್ರೀಕಾಳಹಸ್ತಿ ಮಂಡಲದ ಸಿಂಹಾಚಲ ಕಂಡ್ರಿಗ ಗ್ರಾಮದಲ್ಲಿ 55 ವರ್ಷಗಳಷ್ಟು ಹಳೆಯದಾದ ಭೂ ವಿವಾದವನ್ನು ಬುಧವಾರ ತಿರುಪತಿ ಜಿಲ್ಲಾಧಿಕಾರಿ ಎಸ್. ವೆಂಕಟೇಶ್ವರ್ ಅವರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಾಯಿತು.
1998 ರಲ್ಲಿ 98 ಪರಿಶಿಷ್ಟ ಜಾತಿ ಕುಟುಂಬಗಳಿಗೆ ಡಿ.ಕೆ.ಟಿ. ಪಟ್ಟಾಗಳಾಗಿ ನೀಡಲಾಗಿದ್ದ 130 ಎಕರೆ ಭೂಮಿ ವಿವಾದದಲ್ಲಿ ಸಿಲುಕಿತ್ತು. ನಂತರ ಅರಣ್ಯ ಇಲಾಖೆಯು ಈ ಭೂಮಿ ಮೀಸಲು ಅರಣ್ಯದ ಭಾಗವೆಂದು ಹೇಳಿಕೊಂಡು ಪಟ್ಟಾಗಳನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಸಹ ಪಟ್ಟಾ ರದ್ದತಿಗೆ ಆದೇಶಿಸಿದ್ದರೂ, ದಶಕಗಳಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಶ್ರೀಕಾಳಹಸ್ತಿ ಶಾಸಕ ಬೊಜ್ಜಲ ಸುಧೀರ್ ರೆಡ್ಡಿ ಮೂಲಕ ಗ್ರಾಮಸ್ಥರಿಂದ ಬಂದ ಮನವಿಯ ನಂತರ, ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿ, ಈ ಭೂಮಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ ಎಂದು ದೃಢಪಡಿಸಿದರು.
ಶಾಸಕ ಸುಧೀರ್ ರೆಡ್ಡಿ, ಡಿಎಫ್ಒ ವಿವೇಕ್, ಆರ್ಡಿಒ ಭಾನು ಪ್ರಕಾಶ್ ರೆಡ್ಡಿ ಮತ್ತು ಇತರ ಅಧಿಕಾರಿಗಳೊಂದಿಗೆ ಚರ್ಚೆಯ ನಂತರ, ಪಟ್ಟಾಗಳನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಆದರೆ ಪರಿಹಾರವಾಗಿ, ಹೊಸ ಸರ್ಕಾರಿ ಭೂಮಿ ಗುರುತಿಸಿ 90 ಬಾಧಿತ ಕುಟುಂಬಗಳಿಗೆ 90 ದಿನಗಳಲ್ಲಿ ಬೇರೆ ಭೂಮಿ ಹಂಚಿಕೆ ಮಾಡುವ ಭರವಸೆ ನೀಡಲಾಯಿತು.
ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಕುಟುಂಬಗಳು ಆದಾಯ ಗಳಿಸಲು ಸಹಾಯ ಮಾಡಲು ವನ ಸಂರಕ್ಷಣಾ ಸಮಿತಿ(ವಿಎಸ್ಎಸ್)ಯನ್ನು ಸಹ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಟಿಎನ್ಐಇ ಜೊತೆ ಮಾತನಾಡಿದ ಕಲೆಕ್ಟರ್, “ಈ ಎಲ್ಲಾ ಎಸ್ಸಿ ಕುಟುಂಬಗಳು ಭೂರಹಿತ ಕುಟುಂಬಗಳಾಗಿವೆ. ಸರ್ಕಾರ ಅವರಿಗೆ ಪರ್ಯಾಯ ಭೂಮಿ ಮತ್ತು ಸ್ಥಿರ ಆದಾಯದ ಮೂಲವನ್ನು ನೀಡಲು ಬದ್ಧವಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಈ ಸಮಸ್ಯೆ ಕೊನೆಗೂ ಬಗೆಹರಿದಿದ್ದು, ಕುಟುಂಬಗಳು ಮತ್ತು ಅರಣ್ಯ ಇಲಾಖೆಗೆ ದೊಡ್ಡ ರಿಲೀಫ್ ಸಿಕ್ಕಿದೆ” ಎಂದಿದ್ದಾರೆ.
Advertisement