

ಗುವಾಹಟಿ: ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸೈರಾಂಗ್-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಿಂದಾಗಿ ರೈಲಿನ ಎಂಜಿನ್ ಮತ್ತು ಐದು ಬೋಗಿಗಳು ಹಳಿತಪ್ಪಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಈಶಾನ್ಯ ಗಡಿನಾಡು ರೈಲ್ವೆ (ಎನ್ಎಫ್ಆರ್) ವಕ್ತಾರರು ತಿಳಿಸಿದ್ದಾರೆ. ರೈಲು ಸೈರಾಂಗ್ನಿಂದ ನವದೆಹಲಿಗೆ ತೆರಳುತ್ತಿದ್ದ ವೇಳೆ ಅಂದರೆ ಶನಿವಾರ ಬೆಳಗಿನ ಜಾವ 2.17ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೊಜೈ ಜಿಲ್ಲೆಯ ಚಾಂಗ್ಜುರೈ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಜಮುನಾಮುಖ್-ಕಂಪುರ ವಿಭಾಗದ ಮೂಲಕ ಸಂಚರಿಸಬೇಕಿದ್ದ ರೈಲುಗಳು ಉತ್ತರಪ್ರದೇಶದ ಮೂಲಕ ಕಾರ್ಯ ನಿರ್ವಹಿಸುತ್ತಿವೆ ಎಂದು ನಾಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಶ್ ಕದಮ್ ತಿಳಿಸಿದ್ದಾರೆ.
ಘಟನೆಯನ್ನು ದೃಢಪಡಿಸಿರುವ , ಎನ್.ಎಫ್. ರೈಲ್ವೆ ವಿಭಾಗೀಯ ಪ್ರಧಾನ ಕಚೇರಿಯ ಅಧಿಕಾರಿಗಳು, ಅಪಘಾತ ಪರಿಹಾರ ರೈಲುಗಳು ಸ್ಥಳಕ್ಕೆ ತಲುಪಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದೆ: 0361-2731621 / 2731622 / 2731623.
ಹಳಿತಪ್ಪಿದ ಪರಿಣಾಮ ಮತ್ತು ಆನೆಯ ದೇಹದ ಭಾಗಗಳು ಹಳಿಗಳ ಮೇಲೆ ಚದುರಿಹೋಗಿದ್ದರಿಂದ, ಮೇಲಿನ ಅಸ್ಸಾಂ ಮತ್ತು ಈಶಾನ್ಯದ ಇತರ ಭಾಗಗಳಿಗೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಬೋಗಿಗಳ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ರೈಲಿನ ಇತರ ಬೋಗಿಗಳಲ್ಲಿ ಲಭ್ಯವಿರುವ ಖಾಲಿ ಬರ್ತ್ಗಳಲ್ಲಿ ಇರಿಸಲಾಗಿತ್ತು. ರೈಲು ಗುವಾಹಟಿಯನ್ನು ತಲುಪಿದ ನಂತರ, ಎಲ್ಲಾ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತದೆ, ನಂತರ ರೈಲು ತನ್ನ ಮುಂದಿನ ಪ್ರಯಾಣವನ್ನು ಪುನರಾರಂಭಿಸುತ್ತದೆ. ಹಳಿಗಳ ಮೇಲೆ ಹಿಂಡನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ಗಳನ್ನು ಹಾಕಿದರು. ಇದರ ಹೊರತಾಗಿಯೂ, ಆನೆಗಳು ರೈಲಿಗೆ ಡಿಕ್ಕಿ ಹೊಡೆದವು ಎಂದು ವರದಿ ತಿಳಿಸಿದೆ.
ಅಸ್ಸಾಂನಲ್ಲಿ ಇದು ಮೊದಲ ಘಟನೆಯಲ್ಲ. ರೈಲುಗಳಿಗೆ ಡಿಕ್ಕಿ ಹೊಡೆದು ಆನೆಗಳು ಸಾವನ್ನಪ್ಪಿದ ಹಲವಾರು ಘಟನೆಗಳು ನಡೆದಿವೆ. ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ 81 ಕ್ಕೂ ಹೆಚ್ಚು ಆನೆಗಳು ರೈಲುಗಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ.
Advertisement