
ನವದೆಹಲಿ: ಇಡೀ ದೇಶವೇ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳಿಂದ ಬಳಲುತ್ತಿರುವಾಗ, ಕೇಂದ್ರ ಬಜೆಟ್ ಅನ್ನು ಹೊಗಳುವಲ್ಲಿ ಸರ್ಕಾರ ನಿರತವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಟೀಕಿಸಿದ್ದಾರೆ.
ಈ ಬಜೆಟ್ ಜನರನ್ನು "ಮೂರ್ಖರನ್ನಾಗಿಸುವ" ಬಜೆಟ್ ಎಂದಿರುವ ಖರ್ಗೆ, 900 ಇಲಿಗಳನ್ನು ತಿಂದ ನಂತರ ಬೆಕ್ಕು ಪಾಪ ಪರಿಹಾರಕ್ಕೆ ಹಜ್ ಯಾತ್ರೆಗೆ ಹೋಯ್ತು' (ಹಲವಾರು ಪಾಪಗಳನ್ನು ಮಾಡಿದ ನಂತರ ಧರ್ಮನಿಷ್ಠರಾಗಲು ಪ್ರಯತ್ನಿಸುವುದು) ಎಂಬ ಹಿಂದಿ ಗಾದೆಯನ್ನು ಉಲ್ಲೇಖಿಸಿ ಖರ್ಗೆ ಕಿಡಿ ಕಾರಿದ್ದಾರೆ.
ಬಜೆಟ್ ಕುರಿತು ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಮಧ್ಯಮ ವರ್ಗದಿಂದ 54.18 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ಸಂಗ್ರಹಿಸಿದೆ. ಈಗ 12 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿದೆ ಎಂದು ಹೇಳಿದ್ದಾರೆ.
12 ಲಕ್ಷದವರೆಗಿನ ವಿನಾಯಿತಿಯ ಪ್ರಕಾರ 1 ವರ್ಷಕ್ಕೆ 80,000 ಉಳಿತಾಯ, ತಿಂಗಳಿಗೆ ಕೇವಲ 6,666 ರೂ ಮಾತ್ರ. ಇದನ್ನ ಸ್ವತಃ ಹಣಕಾಸು ಸಚಿವರೇ ಹೇಳುತ್ತಿದ್ದಾರೆ. ಕೇಂದ್ರ ಬಜೆಟ್ನಲ್ಲಿ ಯುವಕರಿಗೆ ಏನೂ ಇಲ್ಲ. ಮೇಕ್ ಇನ್ ಇಂಡಿಯಾ, ಅದರ ನ್ಯೂನತೆ ಮರೆಮಾಚಲು ರಾಷ್ಟ್ರೀಯ ಉತ್ಪಾದನಾ ಮಿಷನ್ ಆಗಿ ಮಾಡಲಾಗಿದೆ ಎಂದರು.
"ಇಡೀ ದೇಶವು ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದೆ, ಆದರೆ ಮೋದಿ ಸರ್ಕಾರ ಸುಳ್ಳು ಹೊಗಳಿಕೆಗಳನ್ನು ಗಳಿಸುವ ಹಠ ಹಿಡಿದಿದೆ" ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ನಿನ್ನೆ ಪ್ರಧಾನಿ ಬಜೆಟ್ನಲ್ಲಿ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಎಂದಿದ್ದರು. ಆದರೆ, ಬಜೆಟ್ನಲ್ಲಿ ಅಂತಹದ್ದೇನಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವ ಮಾರ್ಗಸೂಚಿಯೇ ಇಲ್ಲ. ಕೃಷಿ ಸರಕುಗಳ ಮೇಲಿನ ಜಿಎಸ್ಟಿ ದರಗಳಲ್ಲಿ ರಿಯಾಯ್ತಿ ನೀಡಿಲ್ಲ. ದಲಿತ, ಬುಡಕಟ್ಟು ಹಾಗೂ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಬಡ ಮಕ್ಕಳಿಗೆ ಆರೋಗ್ಯ, ಶಿಕ್ಷಣಕ್ಕೆ ಯಾವುದೇ ಯೋಜನೆ ಇಲ್ಲ ಎಂದು ಕಿಡಿಕಾರಿದ್ದಾರೆ.
Advertisement