
ನವದೆಹಲಿ: ಜನವರಿ 29 ರಂದು ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಡಿದ "ಸಾವಿರಾರು ಜನರಿಗೆ" ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಗೌರವ ಸಲ್ಲಿಸಿದರು. ಆದರೆ ರಾಜ್ಯಕ್ಷ ಅಧ್ಯಕ್ಷ ಜಗದೀಪ್ ಧಂಕರ್ ಅವರು ಖರ್ಗೆ ಅವರಿಗೆ ನಿಮ್ಮ ಹೇಳಿಕೆ ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು. ಇದಕ್ಕೆ ಖರ್ಗೆ ನಿರಾಕರಿಸಿದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ, "ಇದು ನನ್ನ ಅಂದಾಜು ಮತ್ತು ಇದು ಸರಿಯಲ್ಲದಿದ್ದರೆ ನೀವು(ಸರ್ಕಾರ) ಸತ್ಯ ಏನೆಂದು ಹೇಳಬೇಕು" ಎಂದು ರಾಜ್ಯಸಭಾ ಅಧ್ಯಕ್ಷರಿಗೆ ಆಗ್ರಹಿಸಿದರು.
ನಾನು ನನ್ನ ಹೇಳಿಕೆ ಸರಿಪಡಿಸಿಕೊಳ್ಳಲು ಸಿದ್ಧ. "ಯಾರನ್ನೂ ದೂಷಿಸಲು ನಾನು 'ಸಾವಿರಾರು' ಎಂದು ಹೇಳಿಲ್ಲ. ಆದರೆ ಎಷ್ಟು ಜನ ಸತ್ತರು ಎಂಬ ಬಗ್ಗೆ ಕನಿಷ್ಠ ಮಾಹಿತಿಯನ್ನು ನೀಡಿಲ್ಲ. ನಾನು ಹೇಳಿದ್ದು ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ ಸರ್ಕಾರ ಕಾಲ್ತುಳಿತದಲ್ಲಿ ಎಷ್ಟು ಮಂದಿ ಸತ್ತರು, ಎಷ್ಟು ಮಂದಿ ಕಾಣೆಯಾಗಿದ್ದಾರೆ ಎಂಬ ಅಂಕಿಅಂಶಗಳನ್ನು ನೀಡಬೇಕು" ಎಂದು ಖರ್ಗೆ ಹೇಳಿದರು.
ಮಹಾ ಕುಂಭಮೇಳದಲ್ಲಿ ಜನವರಿ 29 ರಂದು ಮೌನಿ ಅಮವಾಸ್ಯೆಯ ಅಮೃತ ಸ್ನಾನದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿತ್ತು.
ಉತ್ತರ ಪ್ರದೇಶ ಸರ್ಕಾರ ಒದಗಿಸಿದ ಅಂಕಿಅಂಶಗಳ ಪ್ರಕಾರ, 30 ಜನರು ಸಾವನ್ನಪ್ಪಿದ್ದಾರೆ ಮತ್ತು 90 ಜನ ಗಾಯಗೊಂಡಿದ್ದಾರೆ. ಆದಾಗ್ಯೂ, ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸುವಾಗ, ಖರ್ಗೆ ಅವರು ಮೃತರಿಗೆ ಗೌರವ ಸಲ್ಲಿಸಲು "ಕುಂಭದಲ್ಲಿ ಮಡಿದ ಸಾವಿರಾರು ಜನರಿಗೆ" ಎಂಬ ಪದ ಬಳಸಿ ಗೌರವ ಸಲ್ಲಿಸಿದರು.
"ಮಹಾ ಕುಂಭದಲ್ಲಿ ಮಡಿದ ಜನರಿಗೆ ನಾನು ನನ್ನ ಗೌರವ ಸಲ್ಲಿಸುತ್ತೇನೆ... ಕುಂಭದಲ್ಲಿ ಮಡಿದ ಸಾವಿರಾರು ಜನರಿಗೆ" ಎಂದು ಅವರು ಹೇಳಿದರು. ಇದು ಆಡಳಿತ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು.
"ಇದು ನನ್ನ ಅಂದಾಜು, ಇದು ಸರಿಯಲ್ಲದಿದ್ದರೆ ನೀವು ಸತ್ಯವನ್ನು ಹೇಳಬೇಕು... ನಿಜವಾದ ಅಂಕಿ ಸಂಖ್ಯೆಗಳು ಏನೆಂದು ಘೋಷಿಸಲು ನಾನು ನಿಮ್ಮನ್ನು ಕೇಳುತ್ತಿದ್ದೇನೆ. ನಾನು ತಪ್ಪಾಗಿ ಹೇಳಿದ್ದರೆ ನಾನು ಸರಿಪಡಿಸಿಕೊಳ್ಳಲು ಸಿದ್ಧನಿದ್ದೇನೆ" ಎಂದು ಖರ್ಗೆ ಹೇಳಿದರು.
Advertisement