
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲು ಪಂಜಾಬ್ನಲ್ಲಿಯೂ ಅದರ ಪತನಕ್ಕೆ ಕಾರಣವಾಗಲಿದೆ ಪಂಜಾಬ್ ನ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.
ಬಿಜೆಪಿ ದೆಹಲಿಯಲ್ಲಿ ಎಎಪಿಯನ್ನು ಸ್ವಚ್ಛಗೊಳಿಸಿ 26 ವರ್ಷಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಿದೆ. ಈ ಗೆಲುವಿನ ಮೂಲಕ ಬಿಜೆಪಿ ತನ್ನ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆಯನ್ನು ವಿಸ್ತರಿಸಿದೆ.
2024 ರ ಲೋಕಸಭಾ ಚುನಾವಣೆಯ ನಂತರ ಆಮ್ ಆದ್ಮಿ ಪಕ್ಷಕ್ಕೆ ಇದು ಎರಡನೇ ಹಿನ್ನಡೆಯಾಗಿದೆ. ಪಂಜಾಬ್ನ 13 ಸಂಸದೀಯ ಕ್ಷೇತ್ರಗಳಲ್ಲಿ ಎಎಪಿ ಕೇವಲ ಮೂರು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.
2022 ರಲ್ಲಿ ಒಟ್ಟು 117 ವಿಧಾನಸಭಾ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದಿತ್ತು.
ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ, ಮುಖ್ಯಮಂತ್ರಿ ಭಗವಂತ್ ಮಾನ್, ಕ್ಯಾಬಿನೆಟ್ ಸಚಿವರು, ಸಂಸದರು ಮತ್ತು ಶಾಸಕರು ಸೇರಿದಂತೆ ಎಎಪಿಯ ಸಂಪೂರ್ಣ ಪಂಜಾಬ್ ಘಟಕ ದೆಹಲಿಯಲ್ಲಿ ಚುನಾವಣಾ ಪ್ರಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು.
50,000 ಸರ್ಕಾರಿ ಉದ್ಯೋಗಗಳನ್ನು ನೀಡುವುದು, 300 ಯೂನಿಟ್ ವಿದ್ಯುತ್ ಉಚಿತ ನೀಡುವುದು ಮತ್ತು 850 'ಮೊಹಲ್ಲಾ ಕ್ಲಿನಿಕ್'ಗಳನ್ನು ತೆರೆಯುವುದು ಮತ್ತು ಪಂಜಾಬ್ನಲ್ಲಿ ಖಾಸಗಿ ಉಷ್ಣ ವಿದ್ಯುತ್ ಸ್ಥಾವರವನ್ನು ಖರೀದಿಸುವುದು ಪಕ್ಷವು ರಾಜ್ಯದಲ್ಲಿ ಮಾಡಿದ ಕೆಲವು ಉತ್ತಮ ಕೆಲಸಗಳ ಬಗ್ಗೆ ಉಲ್ಲೇಖಿಸಿ ನಾಯಕರು ಪ್ರಚಾರ ನಡೆಸಿದ್ದರು.
ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದ ಮಾನ್, ದೆಹಲಿಯಲ್ಲಿ ರೋಡ್ ಶೋಗಳನ್ನು ನಡೆಸಿ ಎಎಪಿ ಅಭ್ಯರ್ಥಿಗಳಿಗೆ ಮತ ಕೇಳಲು ತಮ್ಮ ಸರ್ಕಾರದ ಕಾರ್ಯಗಳನ್ನು ಉಲ್ಲೇಖಿಸಿದ್ದರು. ಆದರೂ ದೆಹಲಿಯ ಜನತೆ ಆಮ್ ಆದ್ಮಿ ಪಕ್ಷಕ್ಕೆ ಮಣೆ ಹಾಕಿಲ್ಲ.
ರಾಷ್ಟ್ರ ರಾಜಧಾನಿಯಲ್ಲಿನ ಸೋಲು ಎಎಪಿಯನ್ನು ಪಂಜಾಬ್ ನ್ನು ತನ್ನ ಆಡಳಿತದಲ್ಲಿರುವ ಏಕೈಕ ರಾಜ್ಯವನ್ನಾಗಿ ಮಾಡಿದೆ.
ದೆಹಲಿ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಂಜಾಬ್ನ ವಿರೋಧ ಪಕ್ಷಗಳ ನಾಯಕರು ಎಎಪಿಯನ್ನು ಟೀಕಿಸಲು ಆರಂಭಿಸಿದ್ದಾರೆ ಮತ್ತು ದೆಹಲಿಯ ಜನರು ಅರವಿಂದ್-ಕೇಜ್ರಿವಾಲ್ ನೇತೃತ್ವದ ಸಂಘಟನೆಯ "ಸುಳ್ಳು ಮತ್ತು ವಂಚನೆಯನ್ನು ಬಹಿರಂಗಪಡಿಸಿದ್ದಾರೆ" ಎಂದು ಹೇಳಿದ್ದಾರೆ.
ಮಾನ್ ಸರ್ಕಾರವೂ ಸಹ ಪಂಜಾಬ್ ನಲ್ಲಿ "ಕೆಟ್ಟ ರ್ನಿರ್ವಹಣೆ" ಮತ್ತು "ಮತದಾರರನ್ನು ಸುಳ್ಳು ಭರವಸೆಗಳಿಂದ ವಂಚಿಸಿದ್ದಾರೆ" ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ ಮಾತನಾಡಿ "ದೆಹಲಿಯಲ್ಲಿ ಆಗಿರುವುದು ಅರವಿಂದ್ ಕೇಜ್ರಿವಾಲ್ ಅವರ ಸುಳ್ಳು, ವಂಚನೆ ಮತ್ತು ಅಪ್ರಾಮಾಣಿಕತೆಯ ಸೋಲು. ಸುಳ್ಳು ಭರವಸೆಗಳನ್ನು ನೀಡುವ ಮೂಲಕ ನೀವು ರಾಜ್ಯವನ್ನು ದೀರ್ಘಕಾಲ ಆಳಲು ಸಾಧ್ಯವಿಲ್ಲ ಎಂದು ಇಂದು ದೆಹಲಿಯ ಜನರು ತೋರಿಸಿದ್ದಾರೆ."
ಎಎಪಿ ಮತ್ತು ಕೇಜ್ರಿವಾಲ್ ದೆಹಲಿಯನ್ನು "ದಯನೀಯ" ಸ್ಥಿತಿಗೆ ತಳ್ಳಿದ್ದಾರೆ ಎಂದು ಅವರು ಆರೋಪಿಸಿದರು.
"ಕಳೆದ ಮೂರು ವರ್ಷಗಳಲ್ಲಿ ಪಂಜಾಬ್ ಜನರನ್ನು ಅವರು ವಂಚಿಸಿದ್ದಾರೆ. ಇದರ ಫಲಿತಾಂಶ ಅವರ ಸ್ಥಿತಿ ದೆಹಲಿಯಲ್ಲಿ ಸಂಭವಿಸಿದ್ದಕ್ಕಿಂತ ಕೆಟ್ಟದಾಗಿರುತ್ತದೆ. ದೆಹಲಿಯ ಸೋಲು ಪಂಜಾಬ್ನ ಎಲ್ಲಾ ಎಎಪಿ ನಾಯಕರಿಗೆ ಒಂದು ಪಾಠವಾಗಿದೆ" ಎಂದು ಅವರು ಹೇಳಿದರು.
"ಪಂಜಾಬ್ನಲ್ಲಿ ಎಎಪಿ ಸರ್ಕಾರದ ಪತನ ಇಂದಿನಿಂದ ಪ್ರಾರಂಭವಾಗುತ್ತದೆ. ಪಕ್ಷದ ಪ್ರಮುಖ ನಾಯಕ (ಕೇಜ್ರಿವಾಲ್) ಸೋಲುತ್ತಿದ್ದಾರೆ. ಎಎಪಿ ಸರ್ಕಾರದ ಕ್ಷಣಗಣನೆ ಪ್ರಾರಂಭವಾಗುತ್ತದೆ" ಎಂದು ಶರ್ಮಾ ಹೇಳಿದ್ದಾರೆ.
ಈಗ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ "ವಿಘಟನೆಯಾಗುತ್ತದೆ" ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ ಹೇಳಿದ್ದಾರೆ. "ಭ್ರಷ್ಟಾಚಾರ, ಕಳಪೆ ಕಾರ್ಯಕ್ಷಮತೆ ಮತ್ತು ಸಂಪೂರ್ಣ ದುರಹಂಕಾರದಿಂದಾಗಿ" ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರು ದೆಹಲಿ ವಿಧಾನಸಭಾ ಸ್ಥಾನಗಳನ್ನು ಕಳೆದುಕೊಂಡರು ಎಂದು ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಜ್ವಾ ಆರೋಪಿಸಿದರು.
"ಬಿಜೆಪಿ ಗೆಲ್ಲುತ್ತಿರುವುದು ನಮಗೆ ಸಂತೋಷವಾಗಿದೆ" ಎಂದು ಬಿಜೆಪಿ ನಾಯಕಿ ಪ್ರಣೀತ್ ಕೌರ್ ಹೇಳಿದರು. "ಅವರ 'ಆಮ್ ಆದ್ಮಿ ಚಿಕಿತ್ಸಾಲಯಗಳು' ಇಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ನಾವು ನೋಡಿದ್ದೇವೆ. ಅವರು ಭರವಸೆ ನೀಡಿದ್ದನ್ನು ಅವರು ಈಡೇರಿಸಲಿಲ್ಲ" ಎಂದು ಪ್ರಣೀತ್ ಕೌರ್ ಹೇಳಿದ್ದಾರೆ.
ದೆಹಲಿಯಲ್ಲಿ ಎಎಪಿಯ ಸೋಲು "ವಿಐಪಿ ಸಂಸ್ಕೃತಿ, ಲೋಕಪಾಲ್, ಸ್ವರಾಜ್ ಮತ್ತು ಭ್ರಷ್ಟಾಚಾರದಂತಹ ತಮ್ಮ ಪ್ರತಿಯೊಂದು ಭರವಸೆಯನ್ನು ಅಕ್ಷರಶಃ ಈಡೇರಿಸದ" "ನಕಲಿ ಕ್ರಾಂತಿಕಾರಿಗಳ" ಸೋಲು ಎಂದು ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಹೇಳಿದರು. ಈ ಜನಾದೇಶ "ಪಂಜಾಬ್ನಲ್ಲಿಯೂ ಎಎಪಿಯ ಪತನದ ಆರಂಭ" ಎಂದು ಖೈರಾ ಹೇಳಿದ್ದಾರೆ.
Advertisement