
ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬುವವರು ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುತ್ತಿಗೆಗೆ ನೇಣು ಬಿಗಿದುಕೊಂಡು ಅಳುತ್ತಿರುವ ಲೈವ್ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಾನವ್ ಶರ್ಮಾ ಆತ್ಮಹತ್ಯೆ ಪ್ರಕರಣ ಬೆಂಗಳೂರಿನ ಅತುಲ್ ಸುಭಾಷ್ ಪ್ರಕರಣವನ್ನೇ ಹೋಲುತ್ತಿದೆ. ಆತ್ಮಹತ್ಯೆಗೂ ಮುನ್ನ ಮಾನವ್ 6 ನಿಮಿಷ 57 ಸೆಕೆಂಡ್ ಗಳ ವಿಡಿಯೋ ಕೂಡ ಮಾಡಿದ್ದು ಇದರಲ್ಲಿ ಪತ್ನಿಯಿಂದ ತನಗೆ ಆದ ಚಿತ್ರಹಿಂಸೆಯನ್ನು ಪ್ರಸ್ತಾಪಿಸಿದ್ದಾನೆ.
ಮಾನವ್ ಶರ್ಮಾ ಮೂಲತಃ ಆಗ್ರಾದ ಡಿಫೆನ್ಸ್ ಕಾಲೋನಿಯ ನಿವಾಸಿಯಾಗಿದ್ದು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾನವ್ ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾಗಿದ್ದಾರೆ.
ಮಾನವ್ ಶರ್ಮ ಅವರ ತಂದೆ ನರೇಂದ್ರ ಶರ್ಮಾ ಅವರ ಹೇಳಿಕೆಯಂತೆ ತನ್ನ ಮಗನಿಗೆ ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿದ್ದು ಮಗ, ಸೊಸೆ ಇಬ್ಬರೂ ಮುಂಬೈಯಲ್ಲಿ ವಾಸವಾಗಿದ್ದರು. ಆದರೆ ಕೆಲವೇ ತಿಂಗಳ ಬಳಿಕ ಸೊಸೆ ಮಗನ ಜೊತೆ ಜಗಳ ಮಾಡಲು ಆರಂಭಿಸಿದ್ದಾಳೆ. ಅಲ್ಲದೆ ತಮ್ಮ ಕುಟುಂಬದ ಮೇಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡುವ ಬಗ್ಗೆಯೂ ಬೆದರಿಸುತಿದ್ದಳು ಎಂದು ಹೇಳಿದ್ದಾರೆ .
ಕೆಲ ಸಮಯದ ಬಳಿಕ ಮಗ ಸೊಸೆ ಆಗ್ರಾಕ್ಕೆ ಬಂದಿದ್ದು ಮಗ ಸೊಸೆಯನ್ನು ತಾಯಿ ಮನೆಗೆ ಬಿಟ್ಟು ಬಂದಿದ್ದ. ಈ ವೇಳೆ ಅತ್ತೆ ಮಾವ ಮಾನವ್ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಇದಾದ ಮರುದಿನ ಅಂದರೆ ಫೆ. 24 ರಂದು ಮುಂಜಾನೆ 5 ಗಂಟೆಗೆ ಮಾನವ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ,ಕೂಡಲೇ ನಾವು ಆತನನ್ನು ಆಸ್ಪತ್ರೆಗೆ ಸಾಗಿಸಿದರು ಅಷ್ಟು ಹೊತ್ತಿಗೆ ಮಗನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಹೇಳಿದ್ದಾರೆ.
ನನಗೆ ನನ್ನ ಹೆಂಡತಿಯಿಂದ ತುಂಬಾ ಬೇಸರವಾಗಿದೆ, ಸಾವನ್ನು ಬಿಟ್ಟು ಬೇರೆ ದಾರಿಯಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿರುವ ಮಾನವ್ ಪುರುಷರನ್ನು ರಕ್ಷಿಸಲು ಕಾನೂನುಗಳನ್ನು ರಚಿಸಬೇಕು. ಅಪ್ಪಾ, ಅಮ್ಮ ನನ್ನನ್ನು ಕ್ಷಮಿಸಿ, ಹೆತ್ತವರಿಗೆ ಯಾರೂ ಕೂಡ ತೊಂದರೆ ಕೊಡಬೇಡಿ, ನಾನು ನನ್ನ ಕರ್ತವ್ಯಕ್ಕೆ ರಜೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇನ್ನೂ ತಮ್ಮ ವಿರುದ್ಧದ ಆರೋಪಗಳಿಗೆ ಮಾನವ್ ಶರ್ಮಾ ಪತ್ನಿ ನಿಖಿತಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಪತಿ ಮದ್ಯ ವ್ಯಸನಿಯಾಗಿದ್ದರು. ಈ ಹಿಂದೆ ಹಲವು ಬಾರಿ ಸ್ವಯಂ ಹಾನಿ ಮಾಡಿಕೊಂಡಿದ್ದರು. ಅತಿಯಾಗಿ ಕುಡಿಯುತ್ತಿದ್ದ ಮಾನವ್ ಶರ್ಮಾ ಈ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದರು. ನಾನು ಅನೇಕ ಬಾರಿ ಅವರನ್ನು ತಡೆದಿದ್ದೆ. ಈ ವಿಷಯವನ್ನು ನಾನು ಅವರ ಪೋಷಕರ ಬಳಿ ಹೇಳಿದ್ದೆ, ಆದರೆ ಅವರು ನಿರ್ಲಕ್ಷ್ಯಿಸಿದ್ದರು. ಇದು ಗಂಡ ಹೆಂಡತಿ ವಿಷಯ ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದರು. ಕುಡಿದು ಬಂದು ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು. ನಾನು ಮಾನವ್ ಅವರ ಪೋಷಕರನ್ನು ಸಂಪರ್ಕಿಸಿದೆ, ಅವರು ಏನಾದರೂ ಅಪಾಯ ತಂದುಕೊಳ್ಳಬಹುದು ಎಂದು ನಾನು ಅವರ ಸಹೋದರಿಗೂ ಎಚ್ಚರಿಸಿದ್ದೆ ಎಂದು ನಿಖಿತಾ ಹೇಳಿದ್ದಾರೆ.
Advertisement