
ಖಲಿಸ್ತಾನ್ ಬೆಂಬಲಿಗ ಮತ್ತು ಪಂಜಾಬ್ನ ಖದೂರ್ ಸಾಹಿಬ್ನ ಸಂಸದ ಅಮೃತಪಾಲ್ ಸಿಂಗ್, ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಯಾಗಿದ್ದಾರೆ. ಇದೀಗ ಹೊಸ ಘೋಷಣೆ ಮಾಡಿರುವ ಅಮೃತಪಾಲ್ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದೇ ಜನವರಿ 14ರಂದು ರ್ಯಾಲಿ ನಡೆಸಲಿದ್ದು, ಇಲ್ಲಿಂದಲೇ ಪ್ರಾದೇಶಿಕ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ. ಲೋಹ್ರಿಯ ಸಂದರ್ಭದಲ್ಲಿ ಆಯೋಜಿಸಲಾದ ಈ ಜಾತ್ರೆಯು ಪಂಜಾಬ್ನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಸಿಖ್ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.
ಪಂಜಾಬ್ನ ಶ್ರೀ ಮುಕ್ತಸರ ಸಾಹಿಬ್ನಲ್ಲಿ ಪಂಥ್ ಬಚಾವೋ, ಪಂಜಾಬ್ ಬಚಾವೋ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಕೆಲವು ಘೋಷಣೆಗಳನ್ನು ಮಾಡಲಾಗುವುದು. 2024ರ ಜುಲೈ 5ರಂದು ಲೋಕಸಭೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಅಮೃತಪಾಲ್ ಸಿಂಗ್ ಅವರನ್ನು ಕೊನೆಯ ಬಾರಿಗೆ ದಿಬ್ರುಗಢದಿಂದ ದೆಹಲಿಗೆ ಕರೆತರಲಾಯಿತು. ಅವರನ್ನು ಪಂಜಾಬ್ ಪೊಲೀಸರು 2023ರ ಏಪ್ರಿಲ್ 23ರಂದು ಬಂಧಿಸಿತ್ತು.
ಪಂಜಾಬ್ ನಲ್ಲಿ ಅಕಾಲಿದಳ ದುರ್ಬಲಗೊಂಡ ನಂತರ, ಮತೀಯ ರಾಜಕಾರಣಕ್ಕೆ ಸ್ವಲ್ಪ ಜಾಗ ಸಿಕ್ಕಿದೆ. ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಇದರ ಲಾಭ ಪಡೆಯಲು ಬಯಸಿದ್ದಾರೆ. ಅಮೃತಪಾಲ್ ಸಿಂಗ್ ಅವರು ಪಂಜಾಬ್ ಅನ್ನು ಪ್ರತ್ಯೇಕಿಸಿ ಖಲಿಸ್ತಾನ್ ರಚಿಸಲು ಬಹಿರಂಗವಾಗಿ ಪ್ರತಿಪಾದಿಸಿದ್ದಾರೆ ಎಂಬುದನ್ನೂ ಗಮನಿಸಬೇಕು. ಮೊದಲು ಅವರ ಚುನಾವಣಾ ಗೆಲುವು ಮತ್ತು ಈಗ ಅವರ ರಾಜಕೀಯ ಪಕ್ಷ ರಚನೆಯು ಪಂಜಾಬ್ನಲ್ಲಿ ಮೂಲಭೂತವಾದಿ ರಾಜಕೀಯದ ಉದಯವಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅಮೃತಪಾಲ್ ಸಿಂಗ್ ಅವರ ತಂದೆ ತಸ್ರೇಮ್ ಸಿಂಗ್ ಕೂಡ ಪಂಜಾಬ್ನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅಮೃತಸರದ ಗೋಲ್ಡನ್ ಟೆಂಪಲ್ಗೆ ಪೂಜೆ ಸಲ್ಲಿಸಿದ ನಂತರ ಅಮೃತಪಾಲ್ ಸಿಂಗ್ ಅವರ ಪೋಷಕರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ, ಪಂಜಾಬ್ ಅನ್ನು ಬಲಪಡಿಸಲು ಹೊಸ ಪಕ್ಷದ ಅಗತ್ಯವಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಪಂಜಾಬ್ ಒಂದು ಸೂಕ್ಷ್ಮ ಹಂತದ ಮೂಲಕ ಸಾಗುತ್ತಿದೆ.
Advertisement