
ನವದೆಹಲಿ: ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಎಎಪಿ ನಡುವೆ ವಾಕ್ಸಮರ ತೀವ್ರಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಶುಕ್ರವಾರ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಪ್ರಧಾನಿ ಮೋದಿ ಅವರು ತಮ್ಮ 43 ನಿಮಿಷಗಳ ಭಾಷಣದಲ್ಲಿ 39 ನಿಮಿಷಗಳ ಕಾಲ ದೆಹಲಿ ಸರ್ಕಾರವನ್ನು ಮತ್ತು ರಾಜಧಾನಿಯ ಜನರನ್ನು ನಿಂದಿಸಿದ್ದಾರೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ಆಡಳಿತದ ಕುರಿತು ಮೋದಿಯವರ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಭಾರತೀಯ ಜನತಾ ಪಕ್ಷವು(ಬಿಜೆಪಿ) ಕೇವಲ "ನಿಂದನೀಯ ರಾಜಕೀಯ" ಮತ್ತು "ವೈಯಕ್ತಿಕ ದಾಳಿ" ಯಲ್ಲಿ ತೊಡಗಿದೆ ಎಂದರು.
“ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಪಟ್ಟಿ ಮಾಡಲು ಎರಡು-ಮೂರು ಗಂಟೆಗಳು ಸಾಕಾಗುವುದಿಲ್ಲ. ಆದರೆ ಮೋದಿಜಿ ತಮ್ಮ ಭಾಷಣದಲ್ಲಿ ಮಾತನಾಡಬಹುದಾದ ಯಾವುದೇ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿಲ್ಲ ಎಂದರು.
ಮುಖ್ಯಮಂತ್ರಿ ಅಭ್ಯರ್ಥಿ, ಸ್ಪಷ್ಟ ನಿರೂಪಣೆ ಇಲ್ಲ ಮತ್ತು ದೆಹಲಿ ಚುನಾವಣೆಗೆ ಬಿಜೆಪಿಗೆ ಯಾವುದೇ ಅಜೆಂಡಾ ಇಲ್ಲದ ಕಾರಣ ತನ್ನದೇ ಆದ 'ಆಪ್ಡಾ'(ವಿಪತ್ತು)ವನ್ನು ಎದುರಿಸುತ್ತಿದೆ ಎಂದು ಎಎಪಿ ಮುಖ್ಯಸ್ಥ, ಮೋದಿ ಟೀಕೆಗಳಿಗೆ ತಿರುಗೇಟು ನೀಡಿದರು.
ಇದೇ ವೇಳೆ ಮೋದಿಯ 'ಶೀಶ್ ಮಹಲ್'ಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, "ತಮಗಾಗಿ 2,700 ಕೋಟಿ ರೂಪಾಯಿ ಮೌಲ್ಯದ ಮನೆ ನಿರ್ಮಿಸಿ, 8,400 ಕೋಟಿ ರೂಪಾಯಿ ಮೌಲ್ಯದ ವಿಮಾನದಲ್ಲಿ ಪ್ರಯಾಣಿಸುವವರು, 10 ಲಕ್ಷ ರೂ. ಸೂಟ್ ಧರಿಸುವವರು, ಶೀಶ್ ಮಹಲ್ ಬಗ್ಗೆ ಮಾತನಾಡುವುದು ಸರಿಯಲ್ಲ" ಎಂದು ಹೇಳಿದರು.
ನಾನು ವೈಯಕ್ತಿಕ ಆರೋಪಗಳನ್ನು ಮಾಡಲು ಬಯಸುವುದಿಲ್ಲ ಮತ್ತು ನಿಂದನೆಯ ರಾಜಕೀಯ ಮಾಡುವುದಿಲ್ಲ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.
ನನಗಾಗಿ 'ಶೀಶ್ ಮಹಲ್' ಅನ್ನು ಸಹ ನಿರ್ಮಿಸಿಕೊಳ್ಳಬಹುದಿತ್ತು. ಆದರೆ, ದೇಶದ ಪ್ರತಿಯೊಬ್ಬರಿಗೂ ಮನೆಗಳನ್ನು ಖಚಿತಪಡಿಸಿಕೊಳ್ಳುವುದು ನನ್ನ ಕನಸಾಗಿದೆ. ಆದರೆ, ಈ ಜನರು ಭ್ರಷ್ಟಾಚಾರ ಮಾಡುತ್ತಾರೆ ಮತ್ತು ನಂತರ ಅದನ್ನು ವೈಭವೀಕರಿಸುತ್ತಾರೆ. ಎಎಪಿ ನಾಚಿಕೆಯಿಲ್ಲದ ಮತ್ತು ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.
Advertisement