'ಬಿಜೆಪಿ ಮಣಿಪುರವನ್ನು ಸುಟ್ಟ ಬೆಂಕಿಕಡ್ಡಿ', ಪ್ರಧಾನಿ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಮಣಿಪುರದಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನ ಮಂತ್ರಿಗಳು ರಾಜಧರ್ಮ"ವನ್ನು ಅನುಸರಿಸದ ಸಾಂವಿಧಾನಿಕ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ ಪೋಸ್ಟ್ನಲ್ಲಿ, ಗಡಿ ರಾಜ್ಯವನ್ನು ಕುದಿಯುವ ಸ್ಥಿತಿಯಲ್ಲಿಡಲು ಬಿಜೆಪಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
"ಬಿಜೆಪಿ ಮಣಿಪುರವನ್ನು ಸುಟ್ಟ ಬೆಂಕಿಕಡ್ಡಿ!" ಎಂದು ಅವರು ತಮ್ಮ ಪೋಸ್ಟ್ನಲ್ಲಿ ಕಿಡಿಕಾರಿದ್ದಾರೆ. ಅವರು ಇತ್ತೀಚಿನ ಹಿಂಸಾಚಾರದ ಕುರಿತು ಸುದ್ದಿ ವರದಿಯ ಸ್ಕ್ರೀನ್ ಶಾಟ್ ನ್ನು ಸಹ ಹಂಚಿಕೊಂಡಿದ್ದಾರೆ.
ನರೇಂದ್ರ ಮೋದಿಯವರೇ, 2022 ರ ಜನವರಿಯಲ್ಲಿ ಬಿಜೆಪಿಗೆ ಮತ ಕೇಳುವುದಕ್ಕಾಗಿ ಮಣಿಪುರಕ್ಕೆ ಹೋಗಿದ್ದು ನಿಮ್ಮ ಕೊನೆಯ ಭೇಟಿಯಾಗಿದೆ. ಮೇ 3, 2023 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತು. 600 ಕ್ಕೂ ಹೆಚ್ಚು ದಿನಗಳು ಕಳೆದಿವೆ. ಉಪಗ್ರಹ ಚಿತ್ರಗಳ ಮೂಲಕ ಮಾಧ್ಯಮ ವರದಿಗಳು ಈಗ ರಾಜ್ಯದಲ್ಲಿ ಹಳ್ಳಿಗಳೇ ನಾಶವಾಗುವುದನ್ನು ಬಹಿರಂಗಪಡಿಸಿವೆ ಎಂದರು.
ಇತ್ತೀಚೆಗೆ ಕಾಂಗ್ಪೊಕ್ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಗುಂಪೊಂದು ದಾಳಿ ನಡೆಸಿದಾಗ ಹೊಸ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ನಿಮ್ಮ ಅಸಮರ್ಥ ಮತ್ತು ನಾಚಿಕೆಯಿಲ್ಲದ ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದಾರೆ ಆದರೆ ರಾಜ್ಯದಲ್ಲಿ ನಿಮ್ಮ ಅನುಪಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
250 ಕ್ಕೂ ಹೆಚ್ಚು ಅಮಾಯಕರ ಸಾವುಗಳು ಮತ್ತು 60,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿರುವ ಸುಂದರ ಗಡಿ ರಾಜ್ಯ ಕುದಿಯುತ್ತಿದ್ದು, ಬಿಜೆಪಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿವೆ, ಜನರು ಇನ್ನೂ 20 ತಿಂಗಳ ಕಾಲ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ಶಾಂತಿ ಮತ್ತು ಸಹಜತೆಯನ್ನು ಖಚಿತಪಡಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಥಮಿಕ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂದರು.
ಇಂಫಾಲ್ ಪೂರ್ವ ಜಿಲ್ಲೆಯ ಗಡಿಯಲ್ಲಿರುವ ಸೈಬೋಲ್ ಗ್ರಾಮದಿಂದ ಕೇಂದ್ರ ಪಡೆಗಳನ್ನು ತೆಗೆದುಹಾಕುವಲ್ಲಿ ಅಧಿಕಾರಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಿನ್ನೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವಿನ ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಡಿಸೆಂಬರ್ 31 ರಂದು ಸೈಬೋಲ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ ಆರೋಪದ ವಿರುದ್ಧ ಕುಕಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ