ಅಪಹರಣ ನಾಟಕ: ಕರ್ನಾಟಕದಲ್ಲಿ ರಾಂಚಿಯ ಸಹೋದರಿಯರ ರಕ್ಷಣೆ, ಐವರ ಬಂಧನ
ರಾಂಚಿ: ನಾಟಕೀಯ ಘಟನೆಯೊಂದರಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೊಳಗಾಗಿದ್ದ ರಾಂಚಿಯ ಹಿಂದ್ಪಿರಿಯ ಇಬ್ಬರು ಸಹೋದರಿಯರನ್ನು ಕರ್ನಾಟಕದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸಲಾಗಿದೆ.
ಜನವರಿ 11 ರಂದು ಅಕ್ಕ-ತಂಗಿಯ ಅಪಹರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ರಾಂಚಿಯಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು. ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಂಚಿ ಎಸ್ಎಸ್ಪಿ ಚಂದನ್ ಕುಮಾರ್ ಸಿನ್ಹಾ ಪ್ರಕರಣದ ಸೂಕ್ಷ್ಮತೆಗಳ ವಿವರ ನೀಡಿದರು.
ಎಸ್ಎಸ್ಪಿ ಸಿನ್ಹಾ ಪ್ರಕಾರ, ಪ್ರಮುಖ ಆರೋಪಿ ಕರ್ನಾಟಕದ ರಾಯಚೂರು ನಿವಾಸಿ ಮೊಹಮ್ಮದ್ ಇಸ್ಮಾಯಿಲ್, ರಹ್ನುಮಾ ಪರ್ವೀನ್ ಜೊತೆ ಸಂಬಂಧ ಹೊಂದಿದ್ದರು. ರಹ್ನುಮಾ ಹಾಗೂ ಆಕೆಯ ಕಿರಿಯ ಸಹೋದರಿಯನ್ನು ಮನವೊಲಿಸಿದ ಇಸ್ಮಾಯಿಲ್ ಅಪಹರಣದ ಕಥೆ ಕಟ್ಟಿದ. ಪೊಲೀಸರು ಮತ್ತು ಕುಟುಂಬವನ್ನು ದಾರಿತಪ್ಪಿಸಲು ಕಿರಿಯ ಸಹೋದರಿ ತಮ್ಮ ತಂದೆಗೆ ಕರೆ ಮಾಡಿ, ಆಟೋ ಚಾಲಕನು ತಮ್ಮನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದಾನೆ. ಫೋನ್ ಮತ್ತು ಪರ್ಸ್ ಕಸಿದುಕೊಂಡಿದ್ದಾನೆ ಎಂದು ಹೇಳಿಸಲಾಗಿತ್ತು.
ಈ ಕರೆ ಮಾಡಿದ ತಕ್ಷಣ ಸಹೋದರಿಯರ ಫೋನ್ ಸ್ವಿಚ್ ಆಫ್ ಆಗಿತ್ತು. ಆದಾಗ್ಯೂ, ಈ ಕರೆಯು ಪೊಲೀಸರನ್ನು ಗೊಂದಲಕ್ಕೀಡುಮಾಡುತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಫೋನ್ ಲೋಕೇಷನ್ ಆಧಾರದ ಮೇಲೆ ಪೊಲೀಸರು ಅರಣ್ಯ, ಬೆಟ್ಟಪ್ರದೇಶಗಳಲ್ಲಿ ಹುಡುಕಾಡಿದ್ದಾರೆ. ಆದರೆ ಆರೋಪಿಗಳು ಫೋನ್ ಮತ್ತು ಸಿಮ್ ಕಾರ್ಡ್ ನಾಶಪಡಿಸಿದ್ದರಿಂದ ಸಾಕಷ್ಟು ಸವಾಲು ಎದುರಿಸಿದ್ದಾರೆ. SIM ಇಲ್ಲದ ಹೊಸ ಫೋನ್ ಗಳನ್ನು ಬಳಸಲು ಆರಂಭಿಸಿದ್ದಾರೆ. ಅವರು ಸಿಮ್ಗಳಿಲ್ಲದ ಹೊಸ ಫೋನ್ ಬಳಸಲಾರಂಭಿಸಿದ್ದು, ಸಂವಹನಕ್ಕಾಗಿ ರೈಲ್ವೆ ವೈ-ಫೈ ಮತ್ತು ಮೊಬೈಲ್ ಹಾಟ್ಸ್ಪಾಟ್ಗಳನ್ನು ಅವಲಂಬಿಸಿದ್ದಾರೆ. ಸಹೋದರಿಯರನ್ನು ರಾಂಚಿಯಿಂದ ಆಲ್ಟೋ ಕಾರಿನಲ್ಲಿ ಜಾರ್ಖಂಡ್ನ ಚಿತಾರ್ಪುರಕ್ಕೆ, ನಂತರ ಕೊಡೆರ್ಮಾಗೆ ಕರೆದೊಯ್ಯಲಾಯಿತು. ಬಳಿಕ ರೈಲಿನಲ್ಲಿ ಗಯಾ (ಬಿಹಾರ) ವಾರಣಾಸಿ ಬಳಿಕ ಅಂತಿಮವಾಗಿ ಕರ್ನಾಟಕಕ್ಕೆ ಕರೆತರಲಾಗಿತ್ತು.
ಕರ್ನಾಟಕದ ಎಡಿಜಿ ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸೋಹದರಿಯರನ್ನು ರಕ್ಷಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಕರ್ನಾಟಕದ ರಾಯಚೂರಿನ ಮೊಹಮ್ಮದ್ ಇಸ್ಮಾಯಿಲ್ , ಜುನೈದ್ ಆಲಂ (ಹಿಂದ್ಪಿರಿ, ರಾಂಚಿ), ಖಾಸಿದ್ ಫಿರೋಜ್ ಮತ್ತು ಮಜರ್ ಆಲಂ (ಚಿತಾರ್ಪುರ, ರಾಮಗಢ) ಮತ್ತು ಇಮ್ರಾನ್ ಖಾನ್ (ಗರ್ಹ್ವಾ) ಸೇರಿದ್ದಾರೆ. ಬಂಧಿತರಿಂದ ಆಲ್ಟೊ ಕಾರು, ಒಂದು ಸ್ಕೂಟಿ, ಐದು ಮೊಬೈಲ್ ಫೋನ್ಗಳು ಮತ್ತು ನಕಲಿ ಆಧಾರ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಬಹುಮಾನ ನೀಡಲಾಗುವುದು ಎಂದು ಎಸ್ಎಸ್ಪಿ ಸಿನ್ಹಾ ಘೋಷಿಸಿದರು.