
ಮಹಾಕುಂಭ ನಗರ: ಮೌನಿ ಅಮಾವಾಸ್ಯೆಯ ದಿನಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡಲಾಗಿದ್ದು, ಈ ದಿನವನ್ನು ಬಹಳ ಶುಭ ದಿನವೆಂದು ಸಹ ಕರೆಯಲಾಗುತ್ತದೆ. ಜನವರಿ 29 ರಂದು ಮೌನಿ ಅಮಾವಾಸ್ಯೆ ಅಂಗವಾಗಿ ಮಹಾಕುಂಭ ಮೇಳದಲ್ಲಿ ಎರಡನೇ ಶಾಹಿ ಸ್ನಾನ ನಡೆಯಲಿದ್ದು, ಸುಮಾರು 10 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇದಕ್ಕಾಗಿ ಪ್ರಯಾಗ್ ರಾಜ್ ರೈಲ್ವೆ ವಿಭಾಗೀಯ 150 ವಿಶೇಷ ರೈಲುಗಳ ಕಾರ್ಯಾಚರಣೆಗೆ ನಿರ್ಧರಿಸಿದೆ. ಈ ರೈಲುಗಳು ಪ್ರಯಾಗ್ ರಾಜ್ ನ ಎಲ್ಲಾ ಒಂಬತ್ತು ನಿಲ್ದಾಣಗಳಿಂದ ಓಡಾಟ ನಡೆಸಲಿದ್ದು, ಮಹಾಕುಂಭ ಮೇಳದ ಭಕ್ತರಿಗೆ ಸುಗಮ ಪ್ರಯಾಣ ಖಾತ್ರಿಪಡಿಸುತ್ತವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ವಿಶೇಷ ರೈಲುಗಳ ಸಂಚಾರದ ಜೊತೆಗೆ ಪ್ರಯಾಣಿಕರ ಸುಗಮ ಪ್ರಯಾಣದ ಅನುಕೂಲಕ್ಕಾಗಿ ಬಣ್ಣ-ಕೋಡೆಡ್ ಟಿಕೆಟಿಂಗ್ (color-coded ticketing) ವಸತಿ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಮೌನಿ ಅಮವಾಸ್ಯೆ ದಿನವಾದ ಜನವರಿ 29 ರಂದು 150 ಕ್ಕೂ ಹೆಚ್ಚು ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ. ಅವುಗಳಲ್ಲಿ ಹೆಚ್ಚಿನವು ಪ್ರಯಾಗರಾಜ್ ಜಂಕ್ಷನ್ನಿಂದ ಸಂಚರಿಸಲಿವೆ ಎಂದು ಪ್ರಯಾಗರಾಜ್ ರೈಲ್ವೆ ವಿಭಾಗದ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಮಾಳವಿಯಾ ತಿಳಿಸಿದ್ದಾರೆ.
ನಿಗದಿತ ಸಮಯಕ್ಕೆ ಸಾಮಾನ್ಯ ರೈಲುಗಳ ಜೊತೆಗೆ ವಿಭಾಗದ ಇತರ ನಿಲ್ದಾಣಗಳಿಂದ ವಿಶೇಷ ರೈಲುಗಳು ಸಂಚರಿಸಲಿವೆ. ಒಂದೇ ದಿನದಲ್ಲಿ 150 ವಿಶೇಷ ರೈಲುಗಳ ಸಂಚಾರ ಒಂದು ಹೆಗ್ಗುರುತು ಆಗಲಿದೆ. ಈ ಯೋಜನೆಯೊಂದಿಗೆ ಮೌನಿ ಅಮವಾಸ್ಯೆಯಂದು ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ರೈಲು ಓಡಿಸುವ ಗುರಿಯನ್ನು ಪ್ರಯಾಗ್ ರಾಜ್ ರೈಲ್ವೆ ವಿಭಾಗ ಹೊಂದಿದೆ. ಈ ವ್ಯವಸ್ಥೆಗಳೊಂದಿಗೆ ಮಹಾ ಕುಂಭ ಮೇಳದಲ್ಲಿ ಮೌನಿ ಅಮವಾಸ್ಯೆಯ ಆಚರಣೆಗೆ ಆಗಮಿಸುವ ಭಕ್ತರಿಗೆ ಅನುಕೂಲ ಒದಗಿಸಲು ರೈಲ್ವೆ ವಿಭಾಗ ಸಿದ್ಧವಾಗಿದೆ.
ಮಹಾ ಸಂಕ್ರಾಂತಿ ದಿನದಂದು ಸುಮಾರು 3.5 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದರು. ಮೊದಲ ಶಾಹಿ ಸ್ನಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸಲು 101 ಜೋಡಿ ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮೌನಿ ಅಮವ್ಯಾಸೆ ದಿನದಿಂದು ಸುುಮಾರು 10 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡುವ ಸಾಧ್ಯತೆಯಿದೆ ಎಂದು ಮೇಳದ ಅಧಿಕಾರಿಗಳು ಅಂದಾಜಿಸಿದ್ದಾರೆ.
Advertisement