
ಚೆನ್ನೈ: ಭಾಷಾ ವಿವಾದದ ನಡುವೆಯೇ ಇದೇ ಮೊದಲ ಬಾರಿಗೆ, ತಮಿಳುನಾಡು ಸರ್ಕಾರವು ತನ್ನ 2025-26 ರ ರಾಜ್ಯ ಬಜೆಟ್ ಮೇಲೆ ದೇಶದ ಅಧಿಕೃತ ರೂಪಾಯಿ ಚಿಹ್ನೆ (₹) ಅನ್ನು ತಮಿಳು ಅಕ್ಷರ 'ರು' ನೊಂದಿಗೆ ಬದಲಾಯಿಸಿದೆ.
ಹಿಂದಿ ಹೇರಿಕೆ, ಭಾಷಾ ನೀತಿಗಳ ಕುರಿತು ನಡೆಯುತ್ತಿರುವ ಚರ್ಚೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ(NEP)2020ಕ್ಕೆ ರಾಜ್ಯದ ವಿರೋಧದ ನಡುವೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ತಮಿಳು ಭಾಷೆಯ ಚಿಹ್ನೆಯನ್ನು ರೂಪಾಯಿ ಸೂಚಕವಾಗಿ ಬಳಸಿದೆ.
ಬಜೆಟ್ ಭಾಷಣ ಮತ್ತು ಸಂಬಂಧಿತ ದಾಖಲೆಗಳ ತಮಿಳಿನಲ್ಲಿದ್ದು, ಶುಕ್ರವಾರ ಬೆಳಗ್ಗೆ ಬಜೆಟ್ ಮಂಡನೆಯಾಗಲಿದೆ.
ತಮಿಳುನಾಡು ಸರ್ಕಾರ ಕಳೆದ ವರ್ಷ ಬಜೆಟ್ ಪ್ರತಿಯಲ್ಲಿ ರುಪಾಯಿ ಚಿಹ್ನೆಯನ್ನೇ ಬಳಸಿತ್ತು. ಆದರೆ ತಮಿಳು ಭಾಷೆಯ ಚಿಹ್ನೆಯನ್ನು ರೂಪಾಯಿ ಸೂಚಕವಾಗಿ ಬಳಸಿದೆ. ಆದಾಗ್ಯೂ, ಬಜೆಟ್ ನ ಇಂಗ್ಲಿಷ್ ಆವೃತ್ತಿಯಲ್ಲಿ ಅಂಕಿಅಂಶಗಳನ್ನು ಉಲ್ಲೇಖಿಸುವಾಗ ಇನ್ನೂ ₹ ಚಿಹ್ನೆಯನ್ನು ಉಳಿಸಿಕೊಂಡಿದೆ.
ತಮಿಳುನಾಡು ಸರ್ಕಾರವು ಈ ಬದಲಾವಣೆಯ ಕುರಿತು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದಾಗ್ಯೂ, ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಅವರು, ಈ ಕ್ರಮವು ತಮಿಳು ಪಕ್ಷದ ನಿಲವು "ಭಾರತಕ್ಕಿಂತ ಭಿನ್ನ" ಎಂಬುದನ್ನು ಪ್ರತಿಬಿಂಬಿಸುತ್ತದೆ. ರೂಪಾಯಿ ಚಿಹ್ನೆಯನ್ನು ರಾಷ್ಟ್ರೀಯ ಲಾಂಛನವಾಗಿ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಡಿಎಂಕೆ ನಾಯಕ ಸರವಣನ್ ಅಣ್ಣಾದೊರೈ ಅವರು, "ಇದರಲ್ಲಿ ಕಾನೂನುಬಾಹಿರ ಏನೂ ಇಲ್ಲ... ಇದು ಕೇಂದ್ರದೊಂದಿಗೆ 'ಘರ್ಷಣೆ' ಅಲ್ಲ. ನಾವು ತಮಿಳಿಗೆ ಆದ್ಯತೆ ನೀಡುತ್ತೇವೆ... ಅದಕ್ಕಾಗಿಯೇ ಸರ್ಕಾರ ಇದನ್ನು ಮುಂದುವರಿಸಿದೆ" ಎಂದು NDTVಗೆ ತಿಳಿಸಿದ್ದಾರೆ.
ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಈ ಕ್ರಮವನ್ನು ಖಂಡಿಸಿ Xನಲ್ಲಿ ಪೋಸ್ಟ್ ಮಾಡಿದ್ದು, "2025-26ರ ಡಿಎಂಕೆ ಸರ್ಕಾರದ ರಾಜ್ಯ ಬಜೆಟ್ ಮೇಲೆ ತಮಿಳನೊಬ್ಬ ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆಯನ್ನು ಬಳಸಲಾಗಿದೆ. ರೂಪಾಯಿ ಲೋಗೋವನ್ನು ಇಡೀ ಭಾರತ ಅಳವಡಿಸಿಕೊಂಡಿದೆ ಮತ್ತು ನಮ್ಮ ಕರೆನ್ಸಿಯಲ್ಲಿ ಅದನ್ನು ಸೇರಿಸಲಾಗಿದೆ. ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದ ತಿರು ಉದಯ್ ಕುಮಾರ್, ಮಾಜಿ ಡಿಎಂಕೆ ಶಾಸಕರ ಮಗ ಎಂದು ಹೇಳಿದ್ದಾರೆ.
Advertisement