
ನವದೆಹಲಿ: ಹಮ್ದರ್ದ್ ಅವರ ರೂಹ್ ಅಫ್ಜಾ ಪಾನೀಯ ಬಗ್ಗೆ ನೀಡಿದ್ದ ವಿವಾದಾತ್ಮಕ "ಶರ್ಬತ್ ಜಿಹಾದ್" ಹೇಳಿಕೆಗೆ ಸಂಬಂಧಪಟ್ಟಂತೆ ಆದೇಶವನ್ನು ಪಾಲಿಸದೆ ನ್ಯಾಯಾಂಗ ನಿಂದನೆ ಎದುರಿಸಿದ ಯೋಗ ಗುರು ರಾಮದೇವ್ ಅವರು ಯಾರ ನಿಯಂತ್ರಣದಲ್ಲೂ ಇಲ್ಲ, ಅವರು ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ಹಮ್ದರ್ದ್ ಅವರ ಉತ್ಪನ್ನಗಳ ಕುರಿತು ಭವಿಷ್ಯದಲ್ಲಿ ಯಾವುದೇ ಹೇಳಿಕೆ ನೀಡಬಾರದು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳಬಾರದು ಎಂದು ನ್ಯಾಯಾಲಯವು ಈ ಹಿಂದೆ ಯೋಗಗುರುಗಳಿಗೆ ಆದೇಶ ನೀಡಿತ್ತು.
ಕಳೆದ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಯೋಗ ಗುರುಗಳ ಅಫಿಡವಿಟ್ ಮತ್ತು ಮೇಲ್ಮೋಟಕ್ಕೆ ಈ ವೀಡಿಯೊ ನ್ಯಾಯಾಂಗ ನಿಂದನೆ ಎನಿಸಿದೆ. ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡುತ್ತೇನೆ, ಯೋಗಗುರುಗಳನ್ನು ಇಲ್ಲಿಗೆ ಕರೆಯುತ್ತೇವೆ ಎಂದು ನ್ಯಾಯಮೂರ್ತಿಗಳಾದ ಅಮಿತ್ ಬನ್ಸಾಲ್ ಹೇಳಿದರು.
ರಾಮದೇವ್ ಅವರು ಯಾರ ನಿಯಂತ್ರಣದಲ್ಲೂ ಇಲ್ಲ. ಅವರು ತಮ್ಮದೇ ಆದ ಲೋಕದಲ್ಲಿ ವಾಸಿಸುತ್ತಾರೆ ಎಂದು ನ್ಯಾಯಾಧೀಶರು ಹೇಳಿದರು. ವಾದಿಗಳ ಪರವಾಗಿ ವಕೀಲರು ಇಂದು ನ್ಯಾಯಾಲಯದಲ್ಲಿ ಹಾಜರಿಲ್ಲದ ಕಾರಣ ಸ್ವಲ್ಪ ಸಮಯದ ನಂತರ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ರಾಮದೇವ್ ಅವರ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದರು.
ಹೀಗಾಗಿ ನ್ಯಾಯಾಲಯವು ವಿಚಾರಣೆಯನ್ನು ಸ್ವಲ್ಪ ಕಾಲ ಮುಂದೂಡಿತು. ವಿವಾದಾತ್ಮಕ ಹೇಳಿಕೆಗಳ ಕುರಿತು ಹಮ್ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ, ಬಾಬಾ ರಾಮದೇವ್ ಮತ್ತು ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ವಿರುದ್ಧ ಅರ್ಜಿ ಸಲ್ಲಿಸಿತ್ತು.
Advertisement