
ನವದೆಹಲಿ: ತನ್ನ ಅದ್ಬುತ ಕಂಠಸಿರಿಯಿಂದ ದೇಶದಾದ್ಯಂತ ಮನೆ ಮಾತಾಗಿದ್ದ ಇಂಡಿಯನ್ ಐಡಲ್ 12 ರ ವಿಜೇತ, ಖ್ಯಾತ ಗಾಯಕ ಪವನ್ದೀಪ್ ರಾಜನ್ ಅವರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ಬೆಳಗ್ಗೆ 3-40 ರ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಘಟನೆ ನಡೆದಿದೆ. ಅವರು ಚಲಿಸುತ್ತಿದ್ದ MG ಹೆಕ್ಟರ್ ಕಾರು ನಿಂತಿದ್ದ ಟ್ರಕ್ಗೆ ಹೋಗಿ ಡಿಕ್ಕಿ ಹೊಡೆದಿದೆ. ಅವರ ಕಾಲು, ತಲೆ ಮತ್ತು ಪಕ್ಕೆಲುಬಿಗೆ ಗಂಭೀರ ಗಾಯಗಳಾಗಿದ್ದು, ನೋಯ್ಡಾದ ಆಸ್ಪತ್ರೆಯಲ್ಲಿ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಪವನ್ ದೀಪ್ ರಾಜನ್ ಅವರು ಪ್ರಸ್ತುತ ಸ್ಥಿರವಾಗಿದ್ದು, ಪ್ರಜ್ಞೆ ಹೊಂದಿದ್ದಾರೆ. ವೈದ್ಯಕೀಯ ತಂಡ ಅಗತ್ಯವಿರುವ ಎಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನೋಯ್ಡಾದ ಫೋರ್ಟಿಸ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಯಾರಿದು ಪವನ್ದೀಪ್ ರಾಜನ್ ? 28 ವರ್ಷದ ಪವನ್ದೀಪ್ ಉತ್ತರಾಖಂಡದ ಚಂಪಾವತ್ನವರು. ಕುಮೋನಿ ಜಾನಪದ ಸಂಗೀತದ ಕುಟುಂಬದಿಂದ ಬಂದವರು. ಅವರ ತಂದೆ ಸುರೇಶ್ ಜಾನಪದ ಗಾಯಕರು, ತಾಯಿ ಸರೋಜ ಮತ್ತು ಸಹೋದರಿ ಜ್ಯೋತಿದೀಪ್ ಕೂಡ ಅದೇ ಕಲಾವಿದರು.
2015 ರಲ್ಲಿ ಅವರು ಗಾಯಕ ಶಾನ್ ತಂಡದ ಭಾಗವಾಗಿ ರಿಯಾಲಿಟಿ ಶೋ 'ದಿ ವಾಯ್ಸ್ ಇಂಡಿಯಾ' ದಲ್ಲಿ ಗೆದ್ದು ರೂ. 50 ಲಕ್ಷ ನಗದು ಬಹುಮಾನ ಗಳಿಸಿದ್ದರು. ಅವರು ಸೂಪರ್ಸ್ಟಾರ್ ಸಿಂಗರ್ 2 ನಲ್ಲಿ ಯುವ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಇಂಡಿಯನ್ ಐಡಲ್ ಸೀಸನ್ 12 ಗೆದ್ದ ನಂತರ ಪವನ್ ದೀಪ್ ರಾಜನ್ ರಾತ್ರೋರಾತ್ರಿ ದೇಶಾದ್ಯಂತ ಜನಪ್ರಿಯರಾದರು. ಅವರು ಇತರ ಐದು ಅಂತಿಮ ಸ್ಪರ್ಧಿಗಳಾದ ಮೊಹಮ್ಮದ್ ಡ್ಯಾನಿಶ್, ಅರುಣಿತಾ ಕಂಜಿಲಾಲ್, ನಿಹಾಲ್ ಟೌರೊ, ಸೈಲಿ ಕಾಂಬ್ಲೆ ಮತ್ತು ಷಣ್ಮುಖ ಪ್ರಿಯಾ ಅವರನ್ನು ಮೀರಿಸಿ ಪ್ರಶಸ್ತಿ ಗೆದ್ದಿದ್ದರು. ಈ ರಿಯಾಲಿಟಿ ಶೋನಲ್ಲಿ ಟ್ರೋಫಿ, ಕಾರು ಮತ್ತು ರೂ. 25 ಲಕ್ಷ ನಗದು ಬಹುಮಾನ ಪಡೆದಿದ್ದಾಗಿ ವರದಿಯಾಗಿದೆ.
Advertisement