
ಚಂಡೀಗಢ: ರೈತ ಸಂಘಗಳಾದ ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ(ಕೆಎಂಎಂ)ಗೆ ಸೇರಿದ ರೈತರ ಪ್ರತಿಭಟನೆಗಳನ್ನು ಪಂಜಾಬ್ ಪೊಲೀಸರು ರಾಜ್ಯಾದ್ಯಂತ ವಿಫಲಗೊಳಿಸುತ್ತಿದ್ದಾರೆ.
ಇಂದು ಹರಿಯಾಣದ ಗಡಿಯಲ್ಲಿರುವ ಶಂಭು ಪೊಲೀಸ್ ಠಾಣೆ ಮುಂದೆ ದಿನವಿಡೀ ಧರಣಿ ನಡೆಸಲು ತೆರಳುತ್ತಿದ್ದ ರೈತರನ್ನು ತಡೆಯಲಾಯಿತು. ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವ ಪ್ರತಿಭಟನೆ ಅಥವಾ ಮುಷ್ಕರಗಳು ಸೇರಿದಂತೆ ಯಾವುದೇ ರೀತಿಯ ರಸ್ತೆ ಅಥವಾ ರೈಲು ತಡೆ ನಡೆಸದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶಂಭು ಪೊಲೀಸ್ ಠಾಣೆಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಭಾರೀ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಕೆಲವು ಸ್ಥಳಗಳಲ್ಲಿ, ಪ್ರತಿಭಟನಾಕಾರರ ಬೆಂಗಾವಲು ಪಡೆಗಳಿಗೆ ಅಡ್ಡಿಪಡಿಸಲು ಲೋಡ್ ಮಾಡಲಾದ ವಾಹನಗಳನ್ನು ರಸ್ತೆಗಳಲ್ಲಿ ನೀಲ್ಲಿಸಲಾಗಿತ್ತು. ಶಂಭು ಗಡಿಯ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ, ಪೊಲೀಸ್ ಸಿಬ್ಬಂದಿ ಪ್ರತಿಯೊಂದು ವಾಹನವನ್ನು ಪರಿಶೀಲಿಸುತ್ತಿದ್ದರು ಮತ್ತು ದೆಹಲಿ ಅಥವಾ ಹರಿಯಾಣ ಕಡೆಗೆ ಹೋಗುವವರಿಗೆ ಮಾತ್ರ ಹಾದುಹೋಗಲು ಅವಕಾಶ ನೀಡುತ್ತಿದ್ದರು. ಇದು ಸಂಚಾರ ದಟ್ಟಣೆಗೆ ಕಾರಣವಾಯಿತು.
"ಯಾರಿಗೂ ಪ್ರತಿಭಟನೆ ನಡೆಸಲು ಮತ್ತು ಜನರಿಗೆ ಕಿರುಕುಳ ನೀಡಲು ಅವಕಾಶ ನೀಡಲಾಗುವುದಿಲ್ಲ. ರೈತರು ಯಾವುದೇ ಕಾರಣಕ್ಕೂ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸಲು ನಾವು ಬಿಡುವುದಿಲ್ಲ" ಎಂದು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ಅವರು ಹೇಳಿದ್ದಾರೆ.
ಪ್ರತಿಭಟನೆಗೂ ಮುನ್ನ ಸೋಮವಾರ ವಿವಿಧ ಜಿಲ್ಲೆಗಳಲ್ಲಿ ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಅನೇಕ ರೈತ ನಾಯಕರನ್ನು ಬಂಧಿಸಲಾಯಿತು.
ಅನೇಕ ರೈತ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ದಲ್ಲೆವಾಲ್ ಅವರು, ಮಂಗಳವಾರ ಅಪ್ಲೋಡ್ ಮಾಡಿದ ವಿಡಿಯೋ ಸಂದೇಶದಲ್ಲಿ, ರೈತ ಸಂಘಗಳು ಮಾರ್ಚ್ 19-20 ರ ಪೊಲೀಸ್ ಕ್ರಮದ ವಿರುದ್ಧ ಧ್ವನಿ ಎತ್ತಲು ಮಾತ್ರ ಬಯಸಿದ್ದವು. ಆದರೆ ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ರಾಜ್ಯವನ್ನು ಒಂದು ಗ್ಯಾರಿಸನ್ ಆಗಿ ಪರಿವರ್ತಿಸಿ ರೈತರ ವಿರುದ್ಧ ದಮನ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಮ್ಮ ನಾಯಕ ಕಾಕಾ ಸಿಂಗ್ ಕೊಟ್ಡಾ ಸೇರಿದಂತೆ ನಿನ್ನೆ ಬಂಧಿಸಲ್ಪಟ್ಟ ಅನೇಕ ನಾಯಕರನ್ನು ಜೈಲುಗಳಿಗೆ ಕಳುಹಿಸಲಾಗಿದೆ. ರೈತರ ಮೇಲಿನ ಈ ದಬ್ಬಾಳಿಕೆ ಮತ್ತೊಂದು ಪ್ರತಿಭಟನೆಗೆ ಕಾರಣವಾಗಬಹುದು ಎಂಬುದನ್ನು ಸಿಎಂ ಮಾನ್ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ದಲ್ಲೆವಾಲ್ ಅವರು ಎಚ್ಚರಿಕೆ ನೀಡಿದ್ದಾರೆ.
Advertisement