
ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕುಟುಂಬ ಸದಸ್ಯರನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಭೇಟಿ ಮಾಡಿದರು.
ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ ಹರಿಯಾಣದ ಕರ್ನಾಲ್ನಲ್ಲಿರುವ ನರ್ವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ಅವರೊಂದಿಗೆ ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಉದಯ್ ಭನ್, ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ, ಶಾಸಕ ಇಂದು ರಾಜ್ ನರ್ವಾಲ್, ಯುವ ಕಾಂಗ್ರೆಸ್ ಅಧ್ಯಕ್ಷ ದಿವ್ಯಾಂಶು ಬುಧಿರಾಜ, ಭೂಪಿಂದರ್ ಲಾಥರ್ ಮತ್ತು ಇತರ ನಾಯಕರು ಇದ್ದರು.
ರಾಹುಲ್ ಗಾಂಧಿ ಮೊದಲು ನರ್ವಾಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಮತ್ತು ಹೆಚ್ಚಿನ ಸಮಯವನ್ನು ಅವರ ಕುಟುಂಬದೊಂದಿಗೆ ಖಾಸಗಿಯಾಗಿ ಕಳೆದರು ಎಂದು ದೀಪೇಂದರ್ ಸಿಂಗ್ ಹೂಡಾ ಹೇಳಿದ್ದಾರೆ.
ಏತನ್ಮಧ್ಯೆ, ಮೇ 4 ರಂದು ಕರ್ನಾಲ್ನಲ್ಲಿ ನೌಕಾ ಅಧಿಕಾರಿಯ ಸ್ಮರಣಾರ್ಥ ಪ್ರಾರ್ಥನಾ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಪತ್ನಿ ಸುಮನ್ ಸೈನಿ ಭಾಗವಹಿಸಿದ್ದರು. "ಇಂದು ತೀವ್ರ ದುಃಖದ ದಿನ, ಕುಟುಂಬವು ತಮ್ಮ ಪ್ರೀತಿಯ ಮಗನನ್ನು ಕಳೆದುಕೊಂಡಿದೆ ಮತ್ತು ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ಅವರು ಹೇಳಿದ್ದರು.
ಇದಕ್ಕು ಮುನ್ನ ಸಿಎಂ ಸೈನಿ ಅವರು, ನರ್ವಾಲ್ ಕುಟುಂಬದ ಸದಸ್ಯರಿಗೆ 50 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದರು.
Advertisement