
ಚಂಡೀಗಢ: ಆಪರೇಷನ್ ಸಿಂಧೂರ್ ನಂತರ, ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ನಿಂದ ಪಾಕಿಸ್ತಾನದ ಕರ್ತಾರ್ಪುರದ ದರ್ಬಾರ್ ಸಾಹಿಬ್ ಗುರುದ್ವಾರದವರೆಗಿನ ಕರ್ತಾರ್ಪುರ ಕಾರಿಡಾರ್ ಅನ್ನು ಯಾತ್ರಿಕರಿಗೆ ಬಂದ್ ಮಾಡಲಾಗಿದೆ.
ಇನ್ನು ಅಮೃತಸರ ಬಳಿಯ ಅಟ್ಟಾರಿ ಗಡಿಯಲ್ಲಿ ನಡೆಯುತ್ತಿದ್ದ ಬೀಟಿಂಗ್ ರಿಟ್ರೀಟ್ ಅನ್ನು ಸಹ ಮುಂದಿನ ಸೂಚನೆ ಬರುವವರೆಗೆ ರದ್ದುಗೊಳಿಸಲಾಗಿದೆ.
ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.
ಕರ್ತಾರ್ಪುರದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಹೋಗಲು ಇಂದು ಬೆಳಗ್ಗೆ ಕರ್ತಾರ್ಪುರ ಕಾರಿಡಾರ್ ತಲುಪಿದ್ದ ಸುಮಾರು 100 ಸಿಖ್ ಭಕ್ತರನ್ನು ಚೆಕ್ಪೋಸ್ಟ್ನಲ್ಲಿ ತಡೆಯಲಾಗಿದ್ದು, ಸುಮಾರು ಒಂದೂವರೆ ಗಂಟೆ ನಂತರ ಮನೆಗೆ ಮರಳುವಂತೆ ಅವರಿಗೆ ಸೂಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗಿನ ಜಾವದಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಪಾಕಿಸ್ತಾನಕ್ಕೆ ತೆರಳಲು ಅವಕಾಶ ನೀಡಲಾಗುವುದಿಲ್ಲ ಎಂಬ ಆತಂಕದ ನಡುವೆ ಯಾತ್ರಿಕರು ಕರ್ತಾರ್ಪುರ ಕಾರಿಡಾರ್ ತಲುಪಿದ್ದರು. "ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಅಧಿಕಾರಿಗಳು ನಮಗೆ ತಿಳಿಸಿದರು ಮತ್ತು ಹಿಂತಿರುಗಲು ಸಲಹೆ ನೀಡಿದರು. ರಾಷ್ಟ್ರೀಯ ಹಿತಾಸಕ್ತಿ ಎಲ್ಲಕ್ಕಿಂತ ಹೆಚ್ಚು" ಎಂದು ಭಕ್ತರೊಬ್ಬರು ಹೇಳಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಬಂದ್ ಮಾಡಿರುವುದನ್ನು ಖಚಿತಪಡಿಸಿದ ಹಿರಿಯ ಅಧಿಕಾರಿಯೊಬ್ಬರು, ಇಂದು ಬೆಳಗ್ಗೆ ಸುಮಾರು 500 ಯಾತ್ರಿಕರು ಕಾರಿಡಾರ್ ಮೂಲಕ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ನೋಂದಾಯಿಸಿಕೊಂಡಿದ್ದರು ಮತ್ತು ಸುಮಾರು 100 ಯಾತ್ರಿಕರು ಗಡಿ ದಾಟಲು ಬಂದಿದ್ದರು. ಆದರೆ ಕಾರಿಡಾರ್ ಮುಚ್ಚಿರುವುದರಿಂದ ವಾಪಸ್ ಮನೆಗೆ ತೆರಳಲು ಸೂಚಿಸಲಾಯಿತು" ಎಂದು ಹೇಳಿದ್ದಾರೆ.
Advertisement